ಬೆಂಗಳೂರು: ಸಚಿವ ಡಿ. ಸುಧಾಕರ್ ಅವರ ಮೇಲೆ ದಲಿತರ ಭೂ ಕಬಳಿಕೆ ಹಾಗೂ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ತುಘಲಕ್ ದರ್ಬಾರಿಗೆ ಹೋಲಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತುಘಲಕ್ ದರ್ಬಾರಿನ ಸಚಿವ ಸಂಪುಟದಲ್ಲಿ ಗೂಂಡಾಗಿರಿ ಸಚಿವರ ಪಟ್ಟಿ.. ಪ್ರತಿಭಟನೆ ಮಾಡುವ ಸಂಘಟನೆಗಳನ್ನು ಬೆದರಿಸುವ ಮೂಲಕ ಧಮ್ಕಿ ಹಾಕುವ ಡಿಸಿಎಂ ಡಿ. ಕೆ. ಶಿವಕುಮಾರ್. ಜಾತಿ ನಿಂದನೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡುವ ಪುಡಿರೌಡಿ ವರ್ತನೆಯ ಸಚಿವ ಡಿ. ಸುಧಾಕರ್’ ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ; ಹೆಚ್.ಡಿ. ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಈಶ್ವರಪ್ಪ!
‘ವರ್ಗಾವಣೆ ದಂಧೆ, ಅಧಿಕಾರಿಗಳಿಗೆ ಕಲೆಕ್ಷನ್ ಟಾರ್ಗೆಟ್, ಕೆಎಸ್ಆರ್ಟಿಸಿ ಸಿಬ್ಬಂದಿ ಆತ್ಮಹತ್ಯೆ ಯತ್ನ, ರೈತರಿಗೆ ಬೆದರಿಕೆ ಹಾಕುವ ಕೃಷಿ ಸಚಿವ ಚೆಲುವರಾಯಸ್ವಾಮಿ..! ಕ್ಷೇತ್ರದಲ್ಲಿ ಗೂಂಡಾ ಪಡೆಯನ್ನು ಬಿಟ್ಟು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿಸುವ ಸಚಿವ ಪ್ರಿಯಾಂಕ್ ಖರ್ಗೆ. ತನ್ನ ಸಹೋದರಿ ಮಿನಿಸ್ಟರ್ ಎನ್ನುವ ಕಾರಣಕ್ಕೆ ಮಾಧ್ಯಮದವರಿಗೆ ಅವಾಜ್ ಹಾಕಿ ಧಮ್ಕಿ ಹಾಕುವ ಸಚಿವೆ ಲಕ್ಣ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ’ ಎಂದು ಬಿಜೆಪಿ ಸಾಲು ಸಾಲು ಪಟ್ಟಿ ಮಾಡಿದೆ.
‘ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಉಡಾಫೆ ಮಾತನಾಡುವ ಸಚಿವ ಶಿವಾನಂದ ಪಾಟೀಲ್..! ಪ್ರಶ್ನಿಸುವವರನ್ನು, ಪ್ರತಿಭಟಿಸುವವರನ್ನು ಗೂಂಡಾ ವರ್ತನೆ ತೋರಿ ಬಾಯಿ ಮುಚ್ಚಿಸುವ ಘನಂದಾರಿ ಕೆಲಸವನ್ನು ಸಿದ್ದರಾಮಯ್ಯ ಅವರ ಸಂಪುಟ ಮಾಡುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.