ಬೆಂಗಳೂರು: ರಾಜ್ಯದಲ್ಲಿ 40% ಕಮಿಷನ್ ಮತ್ತು ಪಿಎಸ್ಐ ಹಗರಣ ಸಂಬಂಧಪಟ್ಟಂತೆ ಸರ್ಕಾರದ ವಿರುದ್ಧ ರಾಮಲಿಂಗ ರೆಡ್ಡಿ ಹರಿಹಾಯ್ದಿದ್ದಾರೆ. ಡರ್ಟಿ ಸರ್ಕಾರದಿಂದ ಏನ್ ನಿರೀಕ್ಷೆ ಮಾಡಕ್ಕಾಗುತ್ತೆ. ಸರ್ಕಾರ ಯಾವತ್ತಾದ್ರೂ ಸ್ವತಂತ್ರ ಬಂದ ನಂತರ ಈ ಮಟ್ಟಕ್ಕೆ, ಲಂಚ ತಗೊಳೋದು ಕಂಡಿದ್ದೀರಾ? ಎಂದು ರಾಮಲಿಂಗ ರೆಡ್ಡಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಳೀನ್ ಕುಮಾರ್ ಕಟೀಲ್ ಅವರು ಏನ್ ಮಾತಾಡ್ತಾರೆ ಅಂತ ಅವರಿಗೇ ಗೊತ್ತಿಲ್ಲ. ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪಿಟೀಲು ಚೆನ್ನಾಗಿ ಬಾರಿಸ್ತಾರೆ. ಯಾರೋ ಏನೋ ಬರೆದು ಕಳಿಸ್ತಾರೆ, ಅದನ್ನ ಇವರು ಪುಂಗಿ ಊದುತ್ತಾರೆ. ಇನ್ನು, ಈ ಕೇಂದ್ರ ಅಥವಾ ರಾಜ್ಯದಲ್ಲಾಗಿರಲಿ, 2018ರಲ್ಲಿ ನರೇಂದ್ರ ಮೋದಿ ಬಂದಾಗ ಸಿದ್ದರಾಮಯ್ಯ ಸರ್ಕಾರ 10% ಕಮಿಷನ್ ಸರ್ಕಾರ ಅಂತ ಹೇಳಿದ್ರು. ಅವತ್ತು ಸಿದ್ದರಾಮಯ್ಯ ಅವರ ಬಗ್ಗೆ ಯಾವುದೇ ಆರೋಪಗಳಿರಲಿಲ್ಲ. ಇವತ್ತು ಇವ್ರು ಪಾಲಿಟಿಕ್ಸ್ ಮಾಡ್ತಿದ್ದಾರೆ, ಡರ್ಟಿ ಸರ್ಕಾರ, ಯಾವುದೇ ಭ್ರಷ್ಟಾಚಾರ ಇಲ್ಲದೆ ಸರ್ಕಾರ ನಡೆಸಿಕೊಂಡು ಹೋಗ್ಲಿ ಅನ್ನೋದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಕಿವಿಮಾತನ್ನು ಹೇಳ್ತೇನೆ ಎಂದು ಹೇಳಿದರು.
ಇನ್ನು ಬಿಜೆಪಿ ಬುರುಡೆ ಬಿಡುವ ಮತ್ತು ಭ್ರಷ್ಟ ಪಕ್ಷ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಅಧ್ಯಕ್ಷ ಬೇರೆ ಇದ್ದಾರೆ ಕಟೀಲ್ ಕೇವಲ ನಾಮಕಾವಸ್ಥೆಯ ಅಧ್ಯಕ್ಷ. ಪಕ್ಷದಲ್ಲಿ ಅವರಿಗೆ ಏನು ಅಧಿಕಾರಗಳಿಲ್ಲ, ಮೇಲೆ ಏನು ಬರೆದುಕೊಡ್ತಾರೋ ಅದನ್ನ ಇವರು ಪುಂಗಿ ಊದುತ್ತಾರೆ ಅಷ್ಟೇ. ಇಂತಹ ಬುರಡೆ ಬಿಡುವ ಮತ್ತು ಭ್ರಷ್ಟ ಪಕ್ಷದವರಿಂದ ಕಾಂಗ್ರೆಸ್ ಪಕ್ಷದವರು ಏನು ಕಲಿಯೋದು ಇಲ್ಲ ಎಂದು ತಿರುಗೇಟು ನೀಡಿದ್ದಾರೆ.