ಕಲಬುರಗಿ : ವಿರೋಧ ಪಕ್ಷದ ನಾಯಕರಾಗಿರುವವರು ಹಗುರವಾಗಿ ಮಾತನಾಡಬಾರದು ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಮಾಡಿದ ಅನೇಕ ಕಾರ್ಯಕ್ರಮಗಳನ್ನು ಜನ ಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಇವರು ಒಳ್ಳೆಯ ಕೆಲಸ ಮಾಡಿದ್ದರೆ ಅಧಿಕಾರ ಯಾಕೆ ಕಳೆದುಕೊಂಡರು? ಹಿಂದಿನಿಂದಲೂ ಹಗುರವಾಗಿ ಮಾತನಾಡುವುದು, ಟೀಕೆ ಮಾಡುವುದು ಮಾಡಿಕೊಂಡು ಬಂದಿರುವಂತದ್ದು, ವಿರೋಧ ಪಕ್ಷದ ಮುಖಂಡರಾಗಿ ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಬಿಜೆಪಿಯ ಪರ ವಾತಾವರಣ ಇದೆ. ಯಾವುದೇ ಶಕ್ತಿ ಕೂಡ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ. ಅನೇಕರು ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ತಿರುಕನ ಕನಸ್ಸು ಕಾಣುತ್ತಿದ್ದಾರೆ. ಅದು ಯಾವುದೂ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ. ದೇಶಕ್ಕೆ ಮೋದಿಯಂತಹ ನಾಯಕ ಸಿಕ್ಕಿದ್ದು ಸೌಭಾಗ್ಯ. ಇಡೀ ಪ್ರಪಂಚವೇ ಅವರನ್ನು ಹಾಡಿ ಹೊಗಳುತ್ತಿದೆ.
ಅಂತಹ ಮಹಾನಾಯಕ ನೇತೃತ್ವ ಇರುವಾಗ ರಾಜ್ಯದಲ್ಲಿ ನಿಶ್ಚಿತವಾಗಿ ಬಿಜೆಪಿ ನೇತೃತ್ವದ ಸರ್ಕಾರ ಮತ್ತೆ ಆಡಳಿತಕ್ಕೆ ಬರಲಿದೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಳ್ಳುತ್ತಿದ್ದೇವೆ. ಇವತ್ತು ಜೆ ಪಿ ನಡ್ಡಾ ಬಂದಿದ್ದಾರೆ. ಅದರಂತೆ ಮುಂದೆ ಎರಡು ಮೂರು ಬಾರಿ ಮೋದಿಯವರು ಕೂಡ ಕರ್ನಾಟಕಕ್ಕೆ ಬರುವವರು ಇದ್ದಾರೆ ಎಂದರು.