ದಾವಣಗೆರೆ: ನನ್ನ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಹೊಂದಿರಲಿಲ್ಲ ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.
ಜಿಲ್ಲೆಯ ಚನ್ನಗಿರಿಯಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಅಧಿಕಾರ ಇರಲಿ, ಬಿಡಲಿ ಜನರ ಮಧ್ಯೆ ಇರುತ್ತೇನೆ. ಜೀವನದಲ್ಲಿ ಉಸಿರು ಇರುವವರೆಗೂ ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ, ನೀವು ನನ್ನ ಜೊತೆಗಿರಬೇಕು, ಚನ್ನಗಿರಿ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಗುರಿ ಎಂದರು.
ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ ರಾಸಾಯನಿಕ ವಸ್ತು ಖರೀದಿಗೆ ಟೆಂಡರ್ ನೀಡಲು 40 ಲಕ್ಷ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಹೀಗಾಗಿ ಪೊಲೀಸ್ ವಿಚಾರಣೆಯು ನಡೆದಿದ್ದು ಪ್ರಾಥಮಿಕ ವಿಚಾರಣೆ ವೇಳೆ ತಂದೆ ವಿರೂಪಾಕ್ಷಪ್ಪ ಸಲುವಾಗಿ ಹಣ ಪಡೆದಿದ್ದು ಎಂದು ತಿಳಿದು ಬಂದಿತ್ತು. ಈ ಕುರಿತು ತನಿಖೆ ಮುಂದುವರೆಯುತ್ತಲೇ ಇದೆ. ಇದೇ ವಿಚಾರವಾಗಿ ಮಾಡಾಳ್ ವಿರೂಪಾಕ್ಷ ಮಾತನಾಡಿದರು.
ಇಷ್ಟು ವರ್ಷದ ರಾಜಕೀಯ ಜೀವನ ಬಿಳಿ ಹಾಳೆ ರೀತಿಯಲ್ಲಿತ್ತು, ಬೇಕಂತಲೇ ಕಾಣದ ಕೈಗಳು ಷಡ್ಯಂತರ ಮಾಡಿವೆ, ಇದೀಗ ಬಂದಿರುವ ಕಳಂಕ ತೊಳೆದು ಹೊರ ಬರುತ್ತೇನೆ. ನೀವು ನನ್ನ ಜೊತೆ ಇರಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭಾವುಕರಾದ್ರು.