Wednesday, November 29, 2023
spot_img
- Advertisement -spot_img

‘ನನ್ನ ಪಕ್ಷಾಂತರದ ಎಫೆಕ್ಟ್, ಪಂಚರಾಜ್ಯ ಚುನಾವಣೆಯಲ್ಲಿ ವರ್ಕೌಟ್ ಆಗ್ತಿದೆ’

ಹುಬ್ಬಳ್ಳಿ: ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಆಗಿದೆ. ಹಾಗಾಗಿಯೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಟಿಕೆಟ್ ನೀಡಿದ್ದಾರೆ. ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿದೆ. ರಿಪೇರಿ ಮಾಡಲಾರದಷ್ಟು ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ವಿಧಾನಪರಿಷತ್ ಸದಸ್ಯ ಜಗದೀಶ್ ಶೆಟ್ಟರ್‌ ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿಸ್ಥಿತಿಯನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ. ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು, ವೀಕ್ಷಕರೂ ಸಹ ಬಂದಿರಲಿಲ್ಲ. ರಾಜ್ಯ ಬಿಜೆಪಿ ಪರಿಸ್ಥಿತಿಗೆ ಇದೇ ಸಾಕ್ಷಿ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : ವಿಡಿಯೋ ವೈರಲ್‌: ಯತೀಂದ್ರ ಪರ ಬ್ಯಾಟ್ ಬೀಸಿದ ಸಚಿವ ಚೆಲುವರಾಯಸ್ವಾಮಿ

ಬಿಜೆಪಿ ಅಧ್ಯಕ್ಷರನ್ನಾಗಿ ವಿಜಯೇಂದ್ರರನ್ನು ನೇಮಕ ಮಾಡಿರುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು, ಅದಕ್ಕಾಗಿ ಮಾಡಿದ್ದಾರೆ. ಆದರೆ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ. ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು ಎಂದು ಟೀಕಿಸಿದ್ದಾರೆ.

ಆ ಭಾವ ಬರದೇ ಇದ್ದಾಗ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಎಲ್ಲವನ್ನು ಕಾದು ನೋಡಿ. ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ. ಪಕ್ಷಕ್ಕಾಗಿ ದುಡಿದವರು, ಸಂಘಟನೆ ಮಾಡಿದವರನ್ನು ದೂರವಿಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸದಾನಂದ ಗೌಡರನ್ನು ದೆಹಲಿಗೆ ಕರೆಯಿಸಿ ಮೂರು ದಿನ ಕಾಯಿಸಿದರು ಐದು ನಿಮಿಷ ಮಾತನಾಡುವಷ್ಟು ಸೌಜನ್ಯವನ್ನು ತೋರಲಿಲ್ಲ. ಬಿಜೆಪಿ ಹಿರಿಯರನ್ನು ನಡೆಸಿಕೊಳ್ಳುವ ರೀತಿಗೆ ಇದೊಂದು ಉದಾಹರಣೆ. ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ ಜೋಷಿ ಮೊದಲಾದವರಿಗೆ ರಾಜಕೀಯ ನಿವೃತ್ತಿ ಕೊಟ್ಟುಬಿಟ್ಟಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ನನಗೆ, ಲಕ್ಷ್ಮಣ್ ಸವದಿ ಮತ್ತು ಈಶ್ವರಪ್ಪಗೆ ಕರ್ನಾಟಕದಲ್ಲಿ ಟಿಕೆಟ್ ಕೊಡಲಿಲ್ಲ. ನನಗೆ ಟಿಕೆಟ್ ತಪ್ಪಿಸಲು ಏನು ಕಾರಣ ಎಂಬ ಬಗ್ಗೆ ಇದುವರೆಗೂ ಹೇಳಿಲ್ಲ. ಇದರ ಪರಿಣಾಮ ಏನಾಯಿತು ಎಂಬುವುದು ಇಡೀ ಜಗತ್ತಿಗೆ ಗೊತ್ತಿದೆ. ಬಿಜೆಪಿ ವರಿಷ್ಠರಿಗೆ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವ ಆಸೆ ಇದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ, ಹೀಗಾಗಿ ಪಂಚ ರಾಜ್ಯಗಳ ಚುನಾವಣೆಯಲ್ಲಿ 70-75 ವಯಸ್ಸಾದವರಿಗೂ ಟಿಕೆಟ್ ನೀಡಿ, ಹಿರಿಯರಿಗೆ ಮಣೆ ಹಾಕಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಡಾ.ಯತೀಂದ್ರ ವಿಡಿಯೋ ವೈರಲ್ ವಿಚಾರ: ‘AI ಟೆಕ್ನಾಲಜಿ ಬಂದಿದೆ ಏನ್ ಬೇಕಾದ್ರು ಆಗಬಹುದು’

ಇಲ್ಲಿ ಟಿಕೆಟ್ ನಿರಾಕರಿಸಿದರೆ, ಪಂಚ ರಾಜ್ಯ ಚುನಾವಣೆಯಲ್ಲಿ ಅವರಿಗೆ ಯಾಕೆ ಟಿಕೆಟ್ ಕೊಟ್ಟರು? ನಿಯಮ ಎಲ್ಲರಿಗೂ ಒಂದೇ ಅನ್ವಯ ಆಗಬೇಕಲ್ಲವೇ? ಅಧಿಕಾರದ ಆಸೆಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರುತ್ತಾರೆ. ವಯಸ್ಸಿನ ನೆಪದಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿಯವರನ್ನು ಮನೆಗೆ ಕಳಿಸಿದ್ದಾರೆ. ಈಗ ನೋಡಿದರೆ 80 ವರ್ಷ ಆದವರಿಗೂ ಟಿಕೆಟ್ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ನನ್ನ ಪಕ್ಷಾಂತರದ ಎಫೆಕ್ಟ್ ತಿಳಿದುಕೊಂಡು ಮೂರರಿಂದ ನಾಲ್ಕು ಜನ ಮಾಜಿ ಸಿಎಂಗಳಿಗೆ ಟಿಕೆಟ್ ನೀಡಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದರಿಂದ ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ. ಬಿಜೆಪಿ ಕುಸಿಯುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಶಕ್ತಿ ತೋರಿಸಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತರು ಧೃತಿಗೆಟ್ಟಿದ್ದಾರೆ, ಭರವಸೆ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles