ದಾವಣಗೆರೆ : ಸನಾತನ ಧರ್ಮ ಶುದ್ದೀಕರಣ ಆಗಬೇಕು. ಸನಾತನದಲ್ಲಿ ಶೂದ್ರರಿಗೆ ಓದುವುದನ್ನು ಕಲಿಸಿರಲಿಲ್ಲ. ಲಾರ್ಡ್ ಮೆಕಾಲೆ ಬಂದ ಮೇಲೆ ಎಲ್ಲರೂ ವ್ಯಾಪಕವಾಗಿ ವಿದ್ಯೆ ಕಲಿತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿ ಮಾಧ್ಯಮಗಳಿಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಇಲ್ಲದಿದ್ದರೆ ಹೇಗೆ ಇಂಗ್ಲಿಷ್ ಓದುತ್ತಿದ್ದರು?. ಯಾವ ಧರ್ಮವು ಮೇಲಲ್ಲ, ಎಲ್ಲವೂ ಸಂವಿಧಾನದ ಒಳಗೆ ಇವೆ ಎಂದು ಪ್ರತಿಪಾದಿಸಿದರು. ಸನಾತನ ಧರ್ಮದ ಶುದ್ದತೆಯಾಗಬೇಕಾಗಿದೆ ಎಂದು ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಒನ್ ನೇಷನ್ ಒನ್ ಎಲೆಕ್ಷನ್ ಗೆ ವಿರೋಧ ವ್ಯಕ್ತಪಡಿಸಿದ ಮಹದೇವಪ್ಪ, ಇದು ಸಂವಿಧಾನದ ವಿರೋಧಿ ನಿಲುವಾಗಿದೆ. ನಮ್ಮ ಗ್ಯಾರಂಟಿ ಯೋಜನೆಗಳು 1.32 ಕೋಟಿ ಬಡವರಿಗೆ ತಲುಪಿದ್ದು ಇದು ಆರ್ಥಿಕ ಸಬಲೀಕರಣಕ್ಕೆ ನೇರವಾಗಿದೆ ಎಂದು ಹೇಳಿದರು.
ಉದಯನಿಧಿ ಸ್ಟಾಲಿನ್ ಹೇಳಿದ್ದೇನು..?
“ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕಾಗುತ್ತದೆ. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇವನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು” ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.