ಧಾರವಾಡ: ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಗೊಂದಲ ಎಲ್ಲವೂ ಬಗೆಹರಿದಿದೆ. ಈಗ ಯಾವುದೇ ತೊಂದರೆ ಆಗದ ಹಾಗೆ ಸರಿಪಡಿಸಿದ್ದೇವೆ. ಈಗಾಗಲೇ 1.9 ಕೋಟಿ ಜನರನ್ನು ಈ ಯೋಜನೆಯ ಮೂಲಕ ತಲುಪಿದ್ದೇವೆ. ಸರ್ಕಾರದಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ಆದರೆ ತಾಂತ್ರಿಕ ತೊಂದರೆ ಕಾರಣಕ್ಕೆ ವಿಳಂಬ ಆಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 15 ಲಕ್ಷ ಜನ ಆಧಾರ ಲಿಂಕ್ ಇಲ್ಲದೆ ಹಾಗೆಯೇ ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದರು. ಇನ್ನೂ ಐದಾರು ಲಕ್ಷ ಜನರದ್ದು ಡಾಕ್ಯುಮೆಂಟೇಷನ್ ಕ್ಲಿಯರ್ ಆಗಬೇಕಿದೆ. ಹೀಗಾಗಿ ಅಂತವರಿಗಾಗಿ ಈ ಯೋಜನೆಯಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಜಿ.ಟಿ.ದೇವೇಗೌಡರು ಕಾಂಗ್ರೆಸ್ ಸೇರ್ತೀನಿ ಅಂದಿದ್ರು: ಸಚಿವ ರಾಜಣ್ಣ
ಕೆಲವರ ಅಕೌಂಟ್ ಚಾಲ್ತಿ ಇರಲಿಲ್ಲ, ಅದರಿಂದಲೂ ತಡವಾಗಿದೆ. ಆದರೆ ಈಗ ಎಲ್ಲ ಬಗೆಹರೆದಿದೆ. ಸರ್ಕಾರದಲ್ಲಿ ಯಾವುದೇ ಯೋಜನೆಗೆ ಅನುದಾನದ ಕೊರತೆ ಇಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳು ಹಣ ತೆಗೆದಿಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನೂ ನಾವು ನಿಲ್ಲಿಸಿಲ್ಲ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರದವರು ಯದ್ವಾತದ್ವಾ ಟೆಂಡರ್ ಮಾಡಿದ್ದರು. ಆದರೆ ಅವರೇ ಈಗ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಅವರು ಮಾಡಿಟ್ಟ ರಾಡಿಯನ್ನು ನಾವು ತೊಳಿತಾ ಇದ್ದೇವೆ. ಇದು ಒಂದು ಹಂತಕ್ಕೆ ಬರುತ್ತದೆ. ಆದರೆ ಇದೆಲ್ಲ ಜನಸಾಮಾನ್ಯರಿಗೆ ಗೊತ್ತಾಗಬೇಕು ಎಂದು ಅವರು ಟೀಕಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಕೈ ಅಭ್ಯರ್ಥಿ ಆಯ್ಕೆಗೆ ಮುಂದಿನ ವಾರ ಧಾರವಾಡ ಕ್ಷೇತ್ರದ ಆಕಾಂಕ್ಷಿಗಳ ಸಭೆ ಮಾಡುತ್ತೇವೆ. ಆಕಾಂಕ್ಷಿಗಳು ಯಾರಿದ್ದಾರೆ ಗೊತ್ತಿಲ್ಲ, ಅದಕ್ಕಾಗಿ ಸಭೆ ಮಾಡಬೇಕಿದೆ. ಎಲ್ಲ ಮುಖಂಡರ ಭೇಟಿಯಾಗಬೇಕಿದೆ. ಅದಕ್ಕಾಗಿಯೇ ಸಭೆ ಮಾಡಬೇಕಿದೆ, ಇಲ್ಲಿಯವರೆಗೆ ಯಾವುದೇ ಆಕಾಂಕ್ಷಿಗಳು ಪ್ರಸ್ತಾವ ಸಲ್ಲಿಸಿಲ್ಲ. ಈ ಸಂಬಂಧ ಮುಂದಿನ ವಾರದಲ್ಲಿ ಸಭೆ ಮಾಡುವೆ ಎಂದು ಹೇಳಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ವಿಶ್ವಾಶಕ್ಕೆ ತೆಗೆದುಕೊಳ್ಳಬೇಕಿದೆ. ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಸಭೆ ಮಾಡುತ್ತೇವೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.