ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಕ್ಷಯ ಮುಕ್ತ ಭಾರತ ಅಭಿಯಾನ’ಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸಾಥ್ ನೀಡಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 10 ಕ್ಷಯ ರೋಗಿಗಳನ್ನು ದತ್ತು ಪಡೆಯುವ ಮೂಲಕ ಕೇಂದ್ರ ಸಚಿವರು ಕ್ಷಯ ರೋಗ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಿದ್ದಾರೆ. ರೋಗಿಯು ಬಿಡದೆ ಸೂಕ್ತ ಅವಧಿಗೆ ಸೂಕ್ತವಾದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಂಡರೆ, ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಔಷಧಗಳ ಸೂಕ್ತ ಪರಿಪಾಲನೆ ಇಲ್ಲದಿದ್ದರೆ, ರೋಗಿಯು ಸಾವನ್ನಪ್ಪಬಹುದು.
ಪ್ರತಿ ವರ್ಷ ಭಾರತದಲ್ಲಿ ಅಂದಾಜು 26 ಲಕ್ಷ ಕ್ಷಯ ರೋಗದ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸುಮಾರು 4.45 ಲಕ್ಷ ಜನ ಈ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂದಿಗೂ ಕ್ಷಯ ರೋಗ ನಿರ್ಮೂಲನೆ ದೇಶದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕ್ಷಯ ರೋಗದ ವಿರುದ್ಧದ ಹೋರಾಟವನ್ನು ಜನಾಂದೋಲನ ಮಾದರಿಯಲ್ಲಿ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಅಭಿಯಾನ ಬೆಂಬಲಿಸಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ ಕ್ಷಯರೋಗದ ಕುರಿತು ಜಾಗೃತರಾಗಲು ಮನವಿ ಮಾಡಿದ್ದಾರೆ. ಮಹತ್ವದ ಅಭಿಯಾನಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ Ni-kshay 2.0 Platform ಆರಂಭಿಸಿದ್ದು, ವೆಬ್ಸೈಟ್ಗೆ ಭೇಟಿ ನೀಡಿ ನೋಂದಾಯಿಸಿಕೊಂಡು ನೀವು “ನಿಕ್ಷಯ ಮಿತ್ರರಾಗಿ. ಬನ್ನಿ ಭಾರತವನ್ನು ಕ್ಷಯ ಮುಕ್ತಗೊಳಿಸೋಣ” ಎಂದು ಪ್ರಲ್ಹಾದ್ ಜೋಶಿ ಕರೆ ನೀಡಿದ್ದಾರೆ.