ಬಳ್ಳಾರಿ: ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಿದರೂ ಕೂಡ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ಜಿ ಸೋಮಶೇಖರ್ ರೆಡ್ಡಿ ಹೇಳಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕೆಆರ್ಪಿಪಿ ಪಕ್ಷದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಗಾಲಿ ಲಕ್ಷ್ಮೀ ಅರುಣಾ ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಹಿನ್ನೆಲೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಸ್ಪರ್ಧೆ ನೂರಕ್ಕೆ ನೂರರಷ್ಟು ಖಚಿತ, ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುವೆ. ಪಕ್ಷೇತರನಾಗಿ ಗೆದ್ದ ನಂತರ ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ಜನಾರ್ದನ ರೆಡ್ಡಿಗೆ ಪಕ್ಷ ಕಟ್ಟುವುದು ಬೇಡ ಎಂದು ಸಲಹೆ ನೀಡಿದ್ದೆವು. ನಾನು ಶ್ರೀರಾಮುಲು, ಕರುಣಾಕರ ರೆಡ್ಡಿ ಸಲಹೆ ನೀಡಿದ್ದೇವೆ. ಆದರೆ ಅದನ್ನು ಮೀರಿ ಹೊಸ ಪಕ್ಷ ಕಟ್ಟಿದ್ದಾರೆ. ನಾನು ಪಕ್ಷಕ್ಕೆ ಸೇರಿಲ್ಲ ಎಂಬ ಸಿಟ್ಟಿನಿಂದ ನನ್ನ ವಿರುದ್ಧ ಸ್ಪರ್ಧೆಗೆ ಘೋಷಣೆ ಮಾಡಿದ್ದಾರೆ. ಕೆಲವರು ಹಣಕ್ಕಾಗಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ ಎಂದರು.
ಆದರೆ ನಿಷ್ಠಾವಂತ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವುದು ನನ್ನ ಜಾಯಮಾನದಲ್ಲೇ ಇಲ್ಲ ಎಂದರು.ಮುನ್ಸಿಪಲ್ ಅಧ್ಯಕ್ಷ ಇದ್ದಾಗಿನಿಂದ ಇಲ್ಲಿಯವರೆಗೆ ಜನರ ಜೊತೆ ಇದ್ದೇನೆ. ಬಳ್ಳಾರಿ ನಗರದ ಜನತೆ ನನ್ನ ಕೈಬಿಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.