ಮುಂಬೈ: ಹಣವು ಭಯೋತ್ಪಾದನೆಯ ಜೀವಾಳವಾಗಿದೆ, ಉಗ್ರ ಸಂಘಟನೆಗಳು ತಮ್ಮ ಸಾಂಸ್ಥಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಮತ್ತು ಸಂಪನ್ಮೂಲಗಳು ಬೇಕಾಗುತ್ತವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಹೇಳಿದ್ದಾರೆ.
ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಭೆಯಲ್ಲಿ ಮಾತನಾಡಿ, ಭಯೋತ್ಪಾದನೆಯ ಜೀವನಾಡಿ ಹಣವಾಗಿದ್ದು, ಹಣ, ಸಂಪನ್ಮೂಲಗಳಿಂದ ಭಯೋತ್ಪಾದನೆ ಇನ್ನೂ ಅಭಿವೃದ್ಧಿ ಹೊಂದುತ್ತಿದೆ ಎಂದರು. ಭಯೋತ್ಪಾದನೆ ಈಗಲು ಅಸ್ತಿತ್ವದಲ್ಲಿದ್ದು, ಅದು ತನ್ನ ಸಂಘಟನೆಗಳನ್ನು ವಿಸ್ತರಿಸುತ್ತಿದೆ. ಇದಕ್ಕಾಗಿ ಅಗತ್ಯ ಆರ್ಥಿಕ ವ್ಯವಸ್ಥೆ ಹಾಗೂ ಸಂಪನ್ಮೂಲಗಳನ್ನು ಪಡೆದುಕೊಳ್ಳುತ್ತಿದೆ. ಭಯೋತ್ಪಾದನೆಯನ್ನು ಎದುರಿಸುವ ಪ್ರಮುಖ ಅಂಶವೆಂದರೆ ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವುದು ಎಂದರು.
ಭಯೋತ್ಪಾದನೆಯು ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಒಡ್ಡಿರುವ ಗಂಭೀರ ಬೆದರಿಕೆಯಾಗಿದೆ, ಅಂತರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ, ಆ ಆಘಾತವನ್ನು ಸ್ಮರಿಸುವುದು ಮತ್ತು ಭಯೋತ್ಪಾದಕರ ದಾಳಿಗೊಳಗಾಗಿ ನೋವಿನಲ್ಲಿರುವವರಿಗೆ ನ್ಯಾಯ ಒದಗಿಸುವುದು ನಮ್ಮ ಮೇಲಿದೆ ಎಂದು ಹೇಳಿದರು.