ಬೆಂಗಳೂರು: ಡಿ.ಕೆ ಶಿವಕುಮಾರ್ಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಜಿ.ಪರಮೇಶ್ವರ್ ಮುಂದಿನ ದಲಿತ ಮುಖ್ಯಮಂತ್ರಿ ನಾನೇ ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾರೆ. ಈ ಬಡಿದಾಟದಲ್ಲಿ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ಡಿ.ಕೆ ಶಿವಕುಮಾರ್ ಅವರೇ ನೀವು ಸಿಎಂ ಆಗೋದು ಡೌಟ್ ಇದೆ, ಹಾಗಾಗಿ ನೀವೇ ಬಿಜೆಪಿಗೆ ಬಂದುಬಿಡಿ ಎಂದು ಆಹ್ವಾನ ಕೊಟ್ಟಿದ್ದಾರೆ. ಕಾಂಗ್ರೆಸ್ನಿಂದ ವಲಸೆ ಹೋಗಿರುವ ಶಾಸಕರಿಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೆ ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಡಿಕೆಶಿ ಬಿಜೆಪಿ ಸೇರುವಂತೆ ಮರು ಆಹ್ವಾನ ಕೊಟ್ಟಿದ್ದಾರೆ. ನಮ್ಮ ಪಕ್ಷಕ್ಕೆ ಬಂದಿರೋ 17 ಜನರ ಮೇಲೆ ಡಿಕೆ ಶಿವಕುಮಾರ್ ಅವ್ರಿಗೆ ಪ್ರೀತಿಯಿದೆ. ಹಾಗಾಗಿ ಆಹ್ವಾನ ನೀಡ್ತಿದ್ದಾರೆ.
ನಮಗೂ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿಯಿದೆ. ಅವರೇ ಬೇಕಿದ್ದರೆ ಬಿಜೆಪಿಗೆ ಬರಲಿ ಎಂದು ಹೇಳಿದ್ದಾರೆ. ನಾವೇ ನಮ್ಮ ನಾಯಕರು, ಪ್ರಧಾನಿಗೆ ಹೇಳ್ತಿವಿ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ತಿವಿ ಅಂತ. ಡಿಕೆಶಿಗೆ ನಮ್ಮ ಪಕ್ಷಕ್ಕೆ ಬಂದ್ರೆ ಒಳ್ಳೆದಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.