ಚಿತ್ರದುರ್ಗ: ನ್ಯಾಯಾಂಗ ಬಂಧನದಲ್ಲಿರುವ ಮುರುಘರಾಜೇಂದ್ರ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರನ್ನು ಗಲ್ಲಿಗೇರಿಸಬೇಕು ಎಂದು ಬಹುಜನ ಸಮಾಜ ಪಕ್ಷ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಮುರುಘಾ ಶ್ರೀಗಳ ಆರೋಪ ಸಾಬೀತಾದಲ್ಲಿ ಅವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಮುರುಘಾ ಶ್ರೀಗಳನ್ನು ವಿಕೃತಿ ಕಾಮಿ ಸ್ವಾಮಿಯನ್ನು ಯಾವುದೇ ಕಾರಣಕ್ಕೂ ನ್ಯಾಯಾಂಗ ಸುಮ್ಮನೆ ಬಿಡಬಾರದು. ಇವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸದೇ ಬಿಟ್ಟರೆ ಧಾರ್ಮಿಕ ಸಂಸ್ಥೆ ಹಾಗೂ ಮಠಗಳ ಮೂಲಕ ವಿದ್ಯಾಸಂಸ್ಥೆಗಳನ್ನು ನಡೆಸುವ ಸ್ವಾಮಿಗಳು ಕೂಡ ತಮ್ಮ ತೃಷೆ ತೀರಿಸಿಕೊಳ್ಳಲು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ.
ಇಂತಹ ಆಲೋಚನೆಯಲ್ಲಿ ಇರುವ ಎಲ್ಲರಿಗೂ ಎಚ್ಚರಿಕೆ ನೀಡುವಂತೆ ಮುರುಘಾ ಶ್ರೀಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಇನ್ನು ಅವರ ವಿರುದ್ಧ ಸಾಕ್ಷಿ ಹೇಳುತ್ತಿರುವ ಮಕ್ಕಳು ಹಾಗೂ ಇತರೆ ಸಾರ್ವಜನಿಕರಿಗೂ ಸರ್ಕಾರ ಮತ್ತು ನ್ಯಾಯಾಲಯದಿಂದ ರಕ್ಷಣೆ ಒದಗಿಸಬೇಕು. ಮಠದಲ್ಲಿ ಅಭ್ಯಾಸ ಮಾಡುತ್ತಿದ್ದ 84 ಮಕ್ಕಳಿಗೆ ರಕ್ಷಣೆ ನಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.