ಧಾರವಾಡ: ರಾಷ್ಟ್ರೀಯ ಯುವಜನೋತ್ಸವದಲ್ಲಿ ಡಾ.ರಾಜ್ ಕುಮಾರ್ ಜನಪ್ರಿಯ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಯುವಜನೋತ್ಸವ ಇಂದು ಸಂಪನ್ನಗೊಳ್ಳಲಿದ್ದು, ಆಲ್ ಒಕೆ ತಂಡಕ್ಕೆ ಜೋಶಿ ನೆನಪಿನ ಕಾಣಿಕೆ ಕೊಡಲು ವೇದಿಕೆ ಮೇಲೆ ಆಗಮಿಸಿದ್ದರು. ಈ ವೇಳೆ ತಂಡದ ಸದಸ್ಯರು ಅವರನ್ನು ಹಾಡಲು ಒತ್ತಾಯಿಸಿದ್ದಾರೆ. ‘ನಾನು ವೇದಿಕೆ ಮೇಲೆ ಮೆಮೆಂಟೊ ಕೊಡಲು ಬಂದಿದ್ದೆ. ಆದರೆ ನನಗೆ ಹಾಡಬೇಕೆಂಬ ಪನಿಶ್ಮೆಂಟ್ ಕೊಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಸಭಾಂಗಣದ ಒಳಗಡೆ 1,500 ಪ್ರತಿನಿಧಿಗಳಿಗೆ ಕಾರ್ಯಕ್ರಮ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗಿದ್ದು ಉಳಿದ 5,500 ಪ್ರತಿನಿಧಿಗಳು ಸಮಾರೋಪ ಸಮಾರಂಭ ವೀಕ್ಷಿಸಲು ವಿಶ್ವವಿದ್ಯಾಲಯದ ಆವರಣದಲ್ಲಿ ಎಲ್.ಇ.ಡಿ. ಪರದೆ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.
ಮಧ್ಯಾಹ್ನದ ಭೋಜನದ ನಂತರ ಧಾರವಾಡ ವಿಶ್ವವಿದ್ಯಾಲಯ ಕಾಲೇಜು ಮೈದಾನದಲ್ಲಿ ವೈಭವದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಭರತನಾಟ್ಯ ಮತ್ತು ಕಥಕ್ ಕಲಾವಿದೆ ನಿರುಪಮಾ ರಾಜೇಂದ್ರ ಅವರಿಂದ ನೃತ್ಯ ವೈಭವ, ಬಾಲಿವುಡ್ ಗಾಯಕ ಅಮಿತ್ ತ್ರಿವೇದಿ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ. ಅದ್ದೂರಿಯಾಗಿ ನಡೆಯುತ್ತಿರುವ ಯುವಜನೋತ್ಸವ ಕಾರ್ಯಕ್ರಮ ಇಂದು ಕೊನೆಗೊಳ್ಳಲಿದೆ.