ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ದೇಶದಲ್ಲೇ ಮೊದಲ ಭಾರಿಗೆ ಕರ್ನಾಟಕದಲ್ಲಿ ಜಾರಿ ಮಾಡಿದ್ದ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರದ್ದು ಮಾಡುವುದಾಗಿ ಘೋಷಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಕಮಲ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತೊಮ್ಮೆ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಎನ್ಇಪಿ ರದ್ದು ನಿರ್ಧಾರ ವಿರೋಧಿಸಿ ಆ.17ರಂದು ಟ್ವೀಟ್ ಮಾಡಿದ್ದ ಅವರು, ‘ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕೇ ವಿನಃ ರಾಜಕೀಯದ ದಾಳವಾಗಬಾರದು’ ಎಂದು ಹೇಳಿದ್ದರು. ಇದೀಗ ಮತ್ತೊಮ್ಮೆ ಕನ್ನಡದಲ್ಲಿ ಟ್ವೀಟ್ ಮಾಡಿರುವ ಅವರು, ‘ಆತ್ಮೀಯ ಮಿತ್ರ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ನನ್ನ ಪ್ರಶ್ನೆಗಳು’ ಎಂದು 12 ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರಧಾನ್ ಪ್ರಶ್ನೆಗಳೇನು?
1) ಔಪಚಾರಿಕ ಶಿಕ್ಷಣದ ಭಾಗವಾಗಿ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆಯೇ? ಮಕ್ಕಳು ಗ್ರೇಡ್ 2 ಮುಗಿಸುವ ಹೊತ್ತಿಗೆ ಅಡಿಪಾಯದ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಸಾಧಿಸಬೇಕೆಂದು ಬಯಸುವುದಿಲ್ಲವೇ?
2) ಭಾರತೀಯ ಆಟಿಕೆಗಳು, ಆಟಗಳು ಮತ್ತು ನಮ್ಮ ಮಕ್ಕಳಿಗೆ ಆಟದ ಆಧಾರಿತ ಕಲಿಕೆಯನ್ನು ವಿರೋಧಿಸುತ್ತೀರಾ? ಕರ್ನಾಟಕದಲ್ಲಿ ‘ಚಿಣ್ಣರ ಮನೆ’ ಯನ್ನು ವಿರೋಧಿಸುತ್ತೀರಾ?
ಇದನ್ನೂ ಓದಿ; NEP ರದ್ದುಗೊಳಿಸಿದ್ದಕ್ಕೆ ಕೇಂದ್ರ ಸಚಿವ ಕೆಂಡಾಮಂಡಲ; ಕನ್ನಡದಲ್ಲೇ ವಾಗ್ದಾಳಿ
3) ಕನ್ನಡ ಮತ್ತು ಇತರ ಭಾರತೀಯ ಭಾಷಾ ಶಿಕ್ಷಣವನ್ನು ವಿರೋಧಿಸುತ್ತೀರಾ? ನೀಟ್, ಸಿಯುಇಟಿ, ಜೆಇಇ ಯಂತಹ ಪರೀಕ್ಷೆಗಳು ಕನ್ನಡ ಸೇರಿದಂತೆ ಭಾರತೀಯ ಭಾಷೆಯಲ್ಲಿ ಪಾರದರ್ಶಕವಾಗಿ ನಡೆಯಬೇಕೆಂದು ಬಯಸುವುದಿಲ್ಲವೇ?
4) ಬಹುಮಾದರಿ ಶಿಕ್ಷಣವನ್ನು ವಿರೋಧಿಸುತ್ತೀರಾ? ವೃತ್ತಿಪರ ಶಿಕ್ಷಣ, ದೈಹಿಕ ಶಿಕ್ಷಣ, ಕಲೆ ಮತ್ತು ಕ್ರೀಡೆಗಳನ್ನು ಶಾಲಾ ಶಿಕ್ಷಣದಲ್ಲಿ ಅಧ್ಯಯನದ ನಿರ್ಣಾಯಕ ಕ್ಷೇತ್ರಗಳಾಗಿ ಏಕೀಕರಿಸುವುದನ್ನು ವಿರೋಧಿಸುತ್ತೀರಾ?
5) ಕರ್ನಾಟಕದ ಯುವಕರು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ವಿಶ್ವದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಪಡೆಯಬೇಕೆಂದು ನಿಮಗೆ ಅನಿಸುವುದಿಲ್ಲವೇ?
6) 21ನೇ ಶತಮಾನದಲ್ಲಿ ವಿದ್ಯಾರ್ಥಿಗಳು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಕಲಿಯಲು ಬಯಸುವುದಿಲ್ಲವೇ? 21ನೇ ಶತಮಾನದ ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ಪಠ್ಯಪುಸ್ತಕಗಳು ಮಕ್ಕಳಿಗೆ ಬೇಡವೇ?
7) ಕಲಿಯುವಾಗ ಗಳಿಸುವ ಅವಕಾಶಗಳನ್ನು ವಿರೋಧಿಸುತ್ತೀರಾ?
8) ಡಯಟ್ ಗಳನ್ನು ಉತ್ಕೃಷ್ಟತೆಯ ಕೇಂದ್ರಗಳಾಗಿ ಮರುರೂಪಿಸುವ ಮೂಲಕ ನಮ್ಮ ಶಿಕ್ಷಕರ ಸಾಮರ್ಥ್ಯದ ಕೇಂದ್ರಗಳನ್ನು ಬಲಪಡಿಸಲು ಬಯಸುವುದಿಲ್ಲವೇ? ಎಂದು ಸರಣಿ ಪ್ರಶ್ನೆಗಳನ್ನು ಡಿ.ಕೆ. ಶಿವಕುಮಾರ್ ಮುಂದಿಟ್ಟಿದ್ದಾರೆ ಪ್ರಧಾನ್.
‘ಎನ್ಇಪಿಯ ಮೇಲಿನ ಇಂತಹ ಅಸಂಬದ್ಧ ಹೇಳಿಕೆಗಳು ದೆಹಲಿಯಲ್ಲಿರುವ ಅವರ ಹೈಕಮಾಂಡ್ ಅನ್ನು ಮೆಚ್ಚಿಸಬಹುದು. ಆದರೆ, ಇದು ಕರ್ನಾಟಕದ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ರಾಜಿ ಮಾಡಿಕೊಂಡಂತೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.