ಹುಬ್ಬಳ್ಳಿ : ಇಬ್ರಾಹಿಂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರೂ, ಅಲ್ಲಿ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಟೀಕಿಸಿದರು
ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಾದಯಾತ್ರೆ, ರ್ಯಾಲಿ ಮಾಡುತ್ತದೆ. ಎಷ್ಟೇ ಯಾತ್ರೆ ನಡೆಸಲಿ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅದು ಮುಳುಗುತ್ತಿರುವ ಹಡಗು. ಬಿಜೆಪಿಗೆ ಪರ್ಯಾಯ ಪಕ್ಷವೇ ಇಲ್ಲ’ ಎಂದರು.
ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗಿ ತಬ್ಬಲಿಯಾಗಿದ್ದಾರೆ’ ಎನ್ನುವ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರಿಂದ ಪಕ್ಷದಲ್ಲಿ ಯಾವ ನಿರ್ಧಾರವನ್ನು ಕೈಗೊಳ್ಳಲಾಗುತ್ತಿಲ್ಲ. ವಿಧಾನ ಪರಿಷತ್ ಸದಸ್ಯ ಸ್ಥಾನ ಸಹ ಪಡೆಯಲು ಅವರಿಂದ ಆಗದೆ ಅನಾಥರಾಗಿದ್ದಾರೆ. ಹೊರಟ್ಟಿ ಅವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ’ ಎಂದರು.
‘ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯರ ಶಕ್ತಿ ಕೇಂದ್ರದ ಜೊತೆ ಮಲ್ಲಿಕಾರ್ಜುನ ಖರ್ಗೆ ಅವರ ಮತ್ತೊಂದು ಶಕ್ತಿ ಕೇಂದ್ರ ಹುಟ್ಟಿಕೊಂಡಿದೆ. ಪಕ್ಷದಲ್ಲಿ ಕಡೆಗಣನೆಗೆ ಒಳಗಾಗಿದ್ದ ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ ಅವರನ್ನು ಖರ್ಗೆ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಪಕ್ಷದಲ್ಲಿ ಮತ್ತಷ್ಟು ವೈಮನಸ್ಸು ಹೆಚ್ಚಾಗಿ ಪರಸ್ಪರ ಕಿತ್ತಾಡುವ ಸ್ಥಿತಿಗೆ ತಲುಪಲಿದ್ದಾರೆ’ ಎಂದು ಹೇಳಿದರು.