ಹೈದರಾಬಾದ್ : ಮೊಹಮ್ಮದ್ ಅಝರುದ್ದೀನ್ ಜೊತೆ ಕ್ರಿಕೆಟ್ ಆಡಿ. ಆದರೆ, ಮತ ಹಾಕಬೇಡಿ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕ, ಸಚಿವ ಕೆ.ಟಿ ರಾಮರಾವ್(ಕೆಟಿಆರ್) ಹೇಳಿದ್ದಾರೆ.
ಶುಕ್ರವಾರ ನಗರದ ಜುಬಿಲಿ ಹಿಲ್ಸ್ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಅಝರುದ್ದೀನ್ ನಿಮ್ಮ ಏರಿಯಾಗೆ ಬಂದರೆ ಅವರ ಜೊತೆ ನಿಮ್ಮ ಮಕ್ಕಳನ್ನು ಕ್ರಿಕೆಟ್ ಆಡಲು ಬಿಡಿ. ಆದರೆ, ಮತ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜರುದ್ದೀನ್ ಜುಬಿಲಿ ಹಿಲ್ಸ್ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಆರ್ಎಸ್ನ ಹಾಲಿ ಶಾಸಕ ಮಾಗಂಟಿ ಗೋಪಿನಾಥ್ ವಿರುದ್ದ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ : ಮಾಜಿ ಸಂಸದೆ, ನಟಿ ವಿಜಯಶಾಂತಿ ಕಾಂಗ್ರೆಸ್ ಸೇರ್ಪಡೆ!
ಉತ್ತರ ಪ್ರದೇಶದ ಮೊರಾದಾಬಾದ್ ಲೋಕಸಭಾ ಕ್ಷೇತ್ರದಿಂದ ಅಝರ್ ಸ್ಪರ್ಧಿಸಿದ್ದರು. ಆದರೆ, ಚುನಾವಣೆಯ ನಂತರ ಅವರು ಹಿಂತಿರುಗಿ ನೋಡಿಲ್ಲ. ಜುಬಿಲಿ ಹಿಲ್ಸ್ನಲ್ಲಿ ಅದೇ ನಡೆಯಲಿದೆ. ನಾನೂ ಅಝರುದ್ದೀನ್ ಅವರ ದೊಡ್ಡ ಅಭಿಮಾನಿ, ಅವರೊಬ್ಬ ಅದ್ಬುತ ಕ್ರಿಕೆಟಿಗ. ಆದರೆ, ಅವರು ಅತ್ಯುತ್ತಮ ರಾಜಕಾರಣಿ ಅಲ್ಲ ಎಂದು ಕೆಟಿಆರ್ ಹೇಳಿದ್ದಾರೆ.
ದೊಡ್ಡ ಕ್ರಿಕೆಟಿಗರು, ಸಿನಿಮಾ ಸ್ಟಾರ್ಗಳಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಗೋಪಿನಾಥ್ನಂತಹ ಸಾಮಾನ್ಯ ಜನರಿಂದ ಮಾತ್ರ ಜನರ ಕೆಲಸ ಮಾಡಿಕೊಡಲು ಸಾಧ್ಯ ಎಂದು ಕೆಟಿಆರ್ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕೊಂಡಾಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.