ನವದೆಹಲಿ: ಸರ್ಕಾರದ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅತ್ಯಂತ ಅಗತ್ಯ. ಬೇಜವಾಬ್ದಾರಿತನದ ಹಣಕಾಸು ನೀತಿಗಳು ಹಾಗೂ ಜನಪ್ರಿಯ ಕಾರ್ಯಕ್ರಮಗಳು ಅಲ್ಪಾವಧಿಯಲ್ಲಿ ರಾಜಕೀಯ ಲಾಭವನ್ನು ತಂದುಕೊಡಬಲ್ಲವು. ಆದರೆ ಇಂಥ ಕೊಡುಗೆಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೋಕ್ಷವಾಗಿ ಉಚಿತ ಯೋಜನೆಗಳ ವಿರುದ್ಧ ಕಿಡಿಕಾರಿದ್ದಾರೆ.
ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂಥ ಯೋಜನೆಗಳ ಪರಿಣಾಮಗಳಿಂದ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು ಹಾಗೂ ದುರ್ಬಲ ವರ್ಗದವರೇ ಆಗಿರುತ್ತಾರೆ. ಜಾಗತಿಕ ಸಾಲದ ಬಿಕ್ಕಟ್ಟಿನ ಕುರಿತು ಪ್ರಶ್ನೆ ಕೇಳಿದ ವೇಳೆ ವಿತ್ತೀಯ ಶಿಸ್ತಿನ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ‘ಸಾಲದ ಬಿಕ್ಕಟ್ಟು ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಸಾಲದ ಬಿಕ್ಕಟ್ಟಿಗೆ ಸಿಲುಕಿರುವ ಅಥವಾ ಬಿಕ್ಕಟ್ಟು ಅನುಭವಿಸುತ್ತಿರುವ ದೇಶಗಳು ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿವೆ. ಇಂತಹ ದೇಶಗಳನ್ನು ಗಮನಿಸಿದ ಹಲವು ದೇಶಗಳು ಅಂತಹ ಬಿಕ್ಕಟ್ಟು ತಡೆಯುವ ವಿಚಾರದಲ್ಲಿ ಎಚ್ಚರಿಕೆ ವಹಿಸಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಬ್ಲಾಸ್ಟ್ ಆಗುವುದು ಖಚಿತ, ನಿಶ್ಚಿತ : ಬಿಜೆಪಿ
ಇತ್ತೀಚೆಗಷ್ಟೆ ಪಿಎಂ ಮೋದಿ ಅವರು ಕರ್ನಾಟಕದ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳ ಬಗ್ಗೆ ಕೆಲವು ರಾಜಕೀಯ ರ್ಯಾಲಿಗಳಲ್ಲಿ ಗುಡುಗಿದ್ದರು. ‘ಪುಕ್ಕಟೆ ಸ್ಕೀಂಗಳಿಗೆ ಹೆಚ್ಚು ಹಣ ನೀಡುತ್ತಿರುವ ಕಾರಣ ಸರ್ಕಾರದ ಮೂಲಸೌಕರ್ಯ ಯೋಜನೆಗಳಿಗೆ ಅನುದಾನ ನೀಡಲು ಆಗುತ್ತಿಲ್ಲ’ ಎಂದಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಉದಾಹರಿಸಿ ವಾಗ್ದಾಳಿ ನಡೆಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.