ಹುಬ್ಬಳ್ಳಿ : ಟಿಕೆಟ್ ಸಿಗದೇ ಇದ್ದಕ್ಕೆ ಬಿಜೆಪಿಯ ಕೆಲವು ನಾಯಕರು ಕಾಂಗ್ರೆಸ್ ಸೇರುತ್ತಿದ್ದು, ಪ್ರಹ್ಲಾದ್ ಜೋಷಿ ಕೂಡಾ ಕಾಂಗ್ರೆಸ್ ಸೇರಲಿದ್ದಾರೆ , ಕಾಯ್ತಾ ಇರಿ ಎಂದು ಕಾಂಗ್ರೆಸ್ ಮುಖಂಡ ಹು-ಧಾ-ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೂರೆ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಹಲವು ನಾಯಕರು ಬಂದಿದ್ದು, ಇನ್ನೂ ಕೆಲವರು ಬರುತ್ತಾರೆ, ಈ ಸಾಲಿನಲ್ಲಿ ಪ್ರಹ್ಲಾದ ಜೋಷಿ ಕೂಡಾ ಇದ್ದಾರೆ ಎಂದು ಅಭಿಪ್ರಾಯಪಟ್ಟರು. ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಒಂದೇ ನಾಣ್ಯದ ಎರಡು ಮುಖಗಳು, 2 ಮಂದಿ ಒಟ್ಟಿಗೆ ರಾಜಕಾರಣ ಮಾಡಿದ್ದಾರೆ, ಹೀಗಾಗಿ ಒಬ್ಬರನ್ನು ಬಿಟ್ಟು ಒಬ್ಬರು ಇರೋದಿಲ್ಲ ಎಂದರು.
ಜಗದೀಶ್ ಶೆಟ್ಟರ್ ನಡೆಯನ್ನೇ ಜೋಷಿ ಅನುಸರಿಸ್ತಾರೆ, ಮುಂದಿನ ದಿನಗಳಲ್ಲಿ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಗೆ ಬರ್ತಾರೆ , ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗ್ತಾರೆ ಎಂದು ತಿಳಿಸಿದರು. ಜಗದೀಶ್ ಶೆಟ್ಟರ್, ಲಕ್ಷ್ಮಣದ ಸವದಿಯಂತಹ ಘಟಾನುಘಟಿ ನಾಯಕರನ್ನು ಬಿಜೆಪಿ ದೂರ ಇಟ್ಟಿದೆ, ಇನ್ನೂ ಅನೇಕರು ಕೈ ಪಡೆ ಸೇರಲಿದ್ದಾರೆ ಎಂದು ಹೇಳಿದರು.