ಬೆಂಗಳೂರು: ರಾಜ್ಯದ 2023ರ ಹೊಸ ಕಾಂಗ್ರೆಸ್ ಸರ್ಕಾರದಲ್ಲಿ ನನಗೆ ಸ್ಪೀಕರ್ ಆಗುವ ಅರ್ಹತೆ ಇಲ್ಲವೆಂದು ಅನಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ನಾನು 8 ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಈ ಬಾರಿ ಏನು ಮಾಡುತ್ತಾರೆ, ಏನು ಇಲ್ಲ ಅನ್ನೋದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಸ್ಪೀಕರ್ ಆಗುವ ಅರ್ಹತೆ ನನಗೆ ಇಲ್ಲವೆಂದು ಅನಿಸುತ್ತದೆ. ಅದು ಬಹಳ ದೊಡ್ಡ ಹುದ್ದೆಯಾಗಿದ್ದು, ಸರ್ಕಾರದಲ್ಲಿಯೇ ಅತ್ಯಂತ ಜವಾಬ್ದಾರಿ ಹುದ್ದೆಯಾಗಿದೆ. ಇದರ ಬಗ್ಗೆ ನನ್ನ ಜೊತೆ ಯಾರು ಚರ್ಚೆಯೂ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ನಾನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಆಗಿದ್ದೆ. ಆದರೆ, ನಮ್ಮ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದ. ಮುಂದಿನ ದಿನಗಳಲ್ಲಿ ಏನು ಮಾಡುತ್ತಾರೆ ನೋಡೋಣ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ್ದು, ಪ್ರಮಾಣವಚನ ಸ್ವೀಕಾರ ಮಾತ್ರ ಬಾಕಿಯಿದೆ. ಆದರೆ, ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದಕ್ಕೆ ಉತ್ತರಗಳಿಲ್ಲ. ಸಚಿವ ಸಂಪುಟದಲ್ಲಿ ನಾನು ಇರುವ ಬಗ್ಗೆ ಮುಖ್ಯಮಂತ್ರಿ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ರಾಜ್ಯದ ಸಚಿವ ಸಂಪುಟದಿಂದ ಹಿರಿಯರನ್ನು ಕೈ ಬಿಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.