ನವದೆಹಲಿ: ಬುಡಕಟ್ಟು ಸಮುದಾಯಕ್ಕೆ ಸೇರಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ, ದೇಶದ ಪ್ರಥಮ ಪ್ರಜೆಯನ್ನಾಗಿ ಮಾಡಿದ್ದು ‘ಸನಾತನ ಧರ್ಮ’ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ಸನಾತನ ಧರ್ಮದಿಂದಲೇ ದ್ರೌಪದಿ ಮುರ್ಮು ಅವರು ದೇಶದ ಪ್ರಥಮ ಪ್ರಜೆಯಾದರು ಎಂದಿದ್ದಾರೆ.
ಹೊಸ ಸಂಸತ್ ಭವನದ ಉದ್ಘಾಟನೆಗೆ ಮುರ್ಮು ಅವರನ್ನು ಏಕೆ ಆಹ್ವಾನಿಸಿಲ್ಲ? ಇದೇ ಸನಾತನ ಧರ್ಮ ಎಂಬ ಸಚಿವ ಉದಯನಿಧಿ ಸ್ಟಾಲಿನ್ ಅವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಜೊತೆಗೆ ರಾಷ್ಟ್ರಪತಿ ಚುನಾವಣೆಯಲ್ಲಿ ಡಿಎಂಕೆ ಏಕೆ ಅವರಿಗೆ ಬೆಂಬಲವಾಗಿ ಮತ ಹಾಕಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ʼಭಾರತ್ʼ ಬಗ್ಗೆ ವಿಪಕ್ಷಗಳ ಆರೋಪಕ್ಕೆ ಯಾರೂ ಪ್ರತಿಕ್ರಿಯಿಸಬೇಡಿ: ಮೋದಿ
ರಾಷ್ಟ್ರಪತಿ ಚುನಾವಣೆಯಲ್ಲಿ ನೀವು ಮುರ್ಮು ವಿರುದ್ಧ ಮತಚಲಾಯಿಸಿದ್ದೀರಿ. ನಾವು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಮತ್ತು ಅದು ಸನಾತನ ಧರ್ಮ; ನೀವು ಅವರ ಪರವಾಗಿ ಏಕೆ ಮತ ಹಾಕಲಿಲ್ಲ? ಸನಾತನ ಧರ್ಮದ ಭಕ್ತರಾದ ನಾವು ಎಲ್ಲರೂ ಸಮಾನರು ಎಂದು ನಂಬಿದ್ದರಿಂದ ಅವರಿಗೆ ಮತ ಹಾಕಿದ್ದೇವೆ. ಸನಾತನ ಧರ್ಮದ ಬಗ್ಗೆ ನಮ್ಮಿಂದ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಂದ ಕಲಿಯಿರಿ’ ಎಂದಿದ್ದಾರೆ.
ದಶಕಗಳಿಂದ ಡಿಎಂಕೆ ಇದೇ ರೀತಿ ಆರೋಪಗಳನ್ನು ಮಾಡುತ್ತಾ ಬಂದಿದೆ. ಬೇರೆ ಯಾವುದೇ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಮಾತನಾಡಿದ್ದರೂ, ಅವರ ಪಕ್ಷವು ಅದರ ವಿರುದ್ಧ ಮೊದಲ ಧ್ವನಿಯಾಗುತ್ತಿತ್ತು. ಆದರೆ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದರಿಂದ ಬೆಂಬಲಕ್ಕೆ ನಿಂತಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.