ನವದೆಹಲಿ : ಕವಯಿತ್ರಿ ಮಧುಮಿತಾ ಶುಕ್ಲಾ ಹತ್ಯೆ ಪ್ರಕರಣದ ಅಪರಾಧಿ ಉತ್ತರ ಪ್ರದೇಶದ ಮಾಜಿ ಸಚಿವ ಅಮರಮಣಿ ತ್ರಿಪಾಠಿ ಅವರ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಮರಮಣಿ ತ್ರಿಪಾಠಿ ಮತ್ತು ಅವರ ಪತ್ನಿಯ ಬಿಡುಗಡೆಗೆ ತಡೆಕೋರಿ ಮಧುಮಿತಾ ಶುಕ್ಲಾ ಅವರ ಸಹೋದರಿ ನಿಧಿ ಶುಕ್ಲಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಕಾರಾಗೃಹ ಇಲಾಖೆ ತ್ರಿಪಾಠಿ ದಂಪತಿಯ ಬಿಡುಗಡೆಗೆ ಆದೇಶ ಹೊರಡಿಸಿದೆ.
ಮೇ 9, 2003ರಂದು ಲಕ್ನೋದ ನಿವಾಸದಲ್ಲಿ ಮಧುಮಿತಾ ಅವರ ಕೊಲೆಯಲ್ಲಿ ಭಾಗಿಯಾದ ಆರೋಪದ ಮೇಲೆ ದಂಪತಿಗಳು ಗೋರಖ್ಪುರ ಜಿಲ್ಲಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ : ಯೂರಿಯಾ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಲಿದೆ : ಭಗವಂತ ಖೂಬಾ
ಪ್ರಕರಣದ ಹಿನ್ನೆಲೆ : 2003 ಮೇ 9ರಂದು 24ರ ಹರೆಯದ ಕವಯಿತ್ರಿ ಮಧುಮಿತಾ ಶುಕ್ಲಾ ಅವರ ಮೃತದೇಹ ಅವರ ಲಕ್ನೋದ ಮನೆಯಲ್ಲಿ ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಉತ್ತರ ಪ್ರದೇಶದ ಮಾಜಿ ಸಿಎಂ, ಬಿಎಸ್ ಪಿ ನಾಯಕಿ ಮಾಯಾವತಿ ಸರ್ಕಾರದಲ್ಲಿ ಅಮರಮಣಿ ತ್ರಿಪಾಠಿ ಸಚಿವರಾಗಿದ್ದರು. ಸಿಎಂ ಮಾಯಾವತಿ ಅವರ ಆಪ್ತರಾಗಿದ್ದರು.
ಬಳಿಕ ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ಡಿಎನ್ಎ ಪರೀಕ್ಷೆಯಲ್ಲಿ ಮೃತ ಮಧುಮಿತಾ ಅವರ ಹೊಟ್ಟೆಯಲ್ಲಿದ್ದ ಮಗು ಸಚಿವ ತ್ರಿಪಾಠಿ ಅವರದ್ದೇ ಎಂದು ಸಾಬೀತಾಗಿತ್ತು. ಮಧುಮಿತಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದು, ಪ್ರಕರಣದಲ್ಲಿ ಅಮರಮಣಿ ತ್ರಿಪಾಠಿ ಮತ್ತು ಅವರ ಪತ್ನಿ ದೋಷಿ ಎಂದು ಕೋರ್ಟ್ ಹೇಳಿತ್ತು. ಆ ಬಳಿಕ 20 ವರ್ಷಗಳಿಂದ ದಂಪತಿ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.