ನವದೆಹಲಿ : ಕೊಲೆಯತ್ನ ಪ್ರಕರಣದಲ್ಲಿ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಅವರ ಜೈಲು ಶಿಕ್ಷೆಗೆ ತಡೆ ನೀಡಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿ ಹಾಕಿದ್ದು, ಆರು ವಾರಗಳಲ್ಲಿ ಹೊಸ ತೀರ್ಪು ನೀಡುವಂತೆ ಪ್ರಕರಣವನ್ನು ಮತ್ತೆ ಹೈಕೋರ್ಟ್ಗೆ ಹಿಂತಿರುಗಿಸಿದೆ.
ಆದರೆ, ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಸಂಸದ ಫೈಝಲ್ ಮತ್ತೊಮ್ಮೆ ಲೋಕಸಭೆಯಿಂದ ಅನರ್ಹಗೊಳ್ಳುವುದರಿಂದ ರಕ್ಷಿಸಿದೆ. ಈ ಹಿಂದಿನ ಹೈಕೋರ್ಟ್ ಆದೇಶ ಆರು ವಾರಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.
ಈ ಅವಧಿಯಲ್ಲಿ ಹೈಕೋರ್ಟ್ ಲಕ್ಷದ್ವೀಪ ಆಡಳಿತದ ಮೇಲ್ಮನವಿಯ ಸಂಬಂಧ ಹೊಸ ತೀರ್ಪು ನೀಡಬೇಕಿದೆ. ಪ್ರಕರಣದಲ್ಲಿ ಫೈಝಲ್ ಅವರ ಶಿಕ್ಷೆಗೆ ತಡೆ ನೀಡಿರುವ ಹೈಕೋರ್ಟ್ನ ವಿಧಾನವು “ತಪ್ಪು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜನವರಿ 11, 2023ರಂದು, ಮಾಜಿ ಕೇಂದ್ರ ಸಚಿವ ದಿ. ಪಿ ಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಯತ್ನಿಸಿದ ಪ್ರಕರಣದಲ್ಲಿ ಲಕ್ಷದ್ವೀಪದ ಕವರತ್ತಿಯ ಸೆಷನ್ಸ್ ನ್ಯಾಯಾಲಯವು ಫೈಝಲ್ ಮತ್ತು ಇತರ ಮೂವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ ₹ 1 ಲಕ್ಷ ದಂಡ ವಿಧಿಸಿತ್ತು.
2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸಾಲಿಹ್ ಅವರನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಫೈಝಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.