ನವದೆಹಲಿ : ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಬಂಧಿತನಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೇ ಅಥವಾ ಜೈಲಿನಿಂದ ಸರ್ಕಾರವನ್ನು ನಡೆಸಬೇಕೇ ಎಂದು ಜನರ ಅಭಿಪ್ರಾಯ ಕೇಳುವಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಹೇಳಿರುವುದಾಗಿ ತಿಳಿದು ಬಂದಿದೆ.
“ನನಗೆ ಅಧಿಕಾರದ ಆಸೆ ಇಲ್ಲ. ಮೊದಲ ಬಾರಿ ಸರ್ಕಾರದ ರಚಿಸಿದಾಗ 49ನೇ ದಿನಕ್ಕೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಯಾರೂ ನನ್ನ ರಾಜೀನಾಮೆ ಕೇಳಿಲ್ಲ. ಆದರೆ, ಬಿಜೆಪಿಯ ಷಡ್ಯಂತ್ರಕ್ಕೆ ನಾವು ಸಿಲುಕಿಕೊಳ್ಳದಂತೆ ನೋಡಿಕೊಳ್ಳಬೇಕು” ಎಂದು ಕೇಜ್ರಿವಾಲ್ ಹೇಳಿದ್ದಾರೆ ಎನ್ನಲಾಗಿದೆ.
ನಾನು ಒಂದು ವೇಳೆ ಬಂಧಿತನಾದರೆ ರಾಜೀನಾಮೆ ನಡೆಸಬೇಕೇ ಅಥವಾ ಜೈಲಿನಿಂದ ಸರ್ಕಾರ ನಡೆಸಬೇಕೇ ಎಂದು ದೆಹಲಿಯ ಪ್ರತಿ ಮನೆಗೂ ಹೋಗಿ ಜನರ ಅಭಿಪ್ರಾಯ ಕೇಳಿ. ಯಾವುದೇ ಕಾರಣಕ್ಕೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಎಂದು ಕೇಜ್ರಿವಾಲ್ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ಅಝರುದ್ಧೀನ್ ಜೊತೆ ಕ್ರಿಕೆಟ್ ಆಡಿ, ವೋಟ್ ಹಾಕ್ಬೇಡಿ: ಕೆಟಿಆರ್
ದೆಹಲಿಯಲ್ಲಿ ಯಾವುದೇ ಅಬಕಾರಿ ಹಗರಣ ನಡೆದಿಲ್ಲ. ಹಗರಣ ನಡೆದಿರುವುದು ಗುಜರಾತ್, ಹರಿಯಾಣದಲ್ಲಿ. ಆದರೆ, ಎಎಪಿ ನಾಯಕರನ್ನು ಜೈಲಿಗೆ ಹಾಕದ ಹೊರತು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿ ಅರ್ಥಮಾಡಿಕೊಂಡಿದೆ. ಹಾಗಾಗಿ, ನಮ್ಮ ನಾಯಕರನ್ನು ಬಂಧಿಸುತ್ತಿದೆ. ನನ್ನನ್ನು ಬಂಧಿಸಿ ಚುನಾವಣೆಯಲ್ಲಿ ಎಎಪಿ ಗೆಲ್ಲುವುದು ನೋಡಿ ಎಂದು ನಾನು ಬಿಜೆಪಿಗೆ ಸವಾಲ್ ಹಾಕುತ್ತೇನೆ ಎಂದು ಕೇಜ್ರಿವಾಲ್ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಅವರು ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸಂಜಯ್ ಸಿಂಗ್, ವಿಜಯ್ ನಾಯರ್ ಅವರನ್ನು ಬಂಧಿಸಿದ್ದಾರೆ. ಈಗ ನನ್ನನ್ನು ಬಂಧಿಸಲು ಮುಂದಾಗಿದ್ದಾರೆ ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.