ಬೆಂಗಳೂರು : ಸಿ.ಟಿ.ರವಿ ಅಧಿಕಾರಕ್ಕೆ ಬರ್ತೀವಿ ಅಂತಾ ಹಗಲುಗನಸು ಕಾಣುತ್ತಿದ್ದಾರೆ. ಬಿಜೆಪಿಯವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾತನಾಡಿ, ನಾವು ಉಚಿತ ಭಾಗ್ಯಗಳನ್ನು ಘೋಷಣೆ ಮಾಡುತ್ತಿಲ್ಲ. ಅಧಿಕಾರಕ್ಕೆ ಬಂದಾಗ ಏನು ಜಾರಿ ಮಾಡುತ್ತೇವೆಯೋ ಅದನ್ನೇ ಹೇಳುತ್ತಿದ್ದೇವೆ. ಈ ಬಾರಿ ನಾವು ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುಧಾಕರ್ ನೇಣು ಹಾಕಿಕೊಳ್ಳುವುದು ಬೇಡ. ಆತ ಬದುಕಿರಲಿ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ 36 ಜನರು ಮೃತಪಟ್ಟರು. ಆದರೆ, ಮೂವರು ಮಾತ್ರ ಸತ್ತಿದ್ದು ಎಂದು ಸುಧಾಕರ್ ಸುಳ್ಳು ಹೇಳುತ್ತಿದ್ದ. ಆತ ಸಚಿನಾಗಲು ಲಾಯಕ್ಕಿಲ್ಲ. ಮೊದಲು ಆರೋಗ್ಯ ಇಲಾಖೆಯಲ್ಲಿನ ಹಗರಣದ ಬಗ್ಗೆ ತನಿಖೆ ಆಗಲಿ. ಆಗ ಸುಧಾಕರ್ ವಿರುದ್ಧದ ಎಲ್ಲಾ ಆರೋಪಗಳು ಸಾಬೀತಾಗುತ್ತದೆ” ಎಂದು ಕಿಡಿಕಾರಿದ್ದಾರೆ.
ಚಾಮರಾಜನಗರದಲ್ಲಿ 2020ರಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಬಲಿಯಾಗಿದ್ದರೆನ್ನಲಾದ ಘಟನೆಯಲ್ಲಿ ಸರ್ಕಾರದ ನಿರ್ಲಕ್ಷ್ಯತೆ ಇದೆ ಎಂಬುದು ಕಾಂಗ್ರೆಸ್ ಆರೋಪ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವ್ಯಾಪಕ ಭ್ರಷ್ಟಾಚಾರ ನಡೆಸಿತು ಎಂದೂ ಕೈ ಪಾಳಯ ಪದೇ ಪದೇ ಆರೋಪ ಮಾಡುತ್ತಾ ಬಂದಿದೆ. ಈ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ಡಾ. ಸುಧಾಕರ್, “ಹಗರಣ ಮಾಡಿರುವುದು ಸಾಬೀತಾದರೆ ಪಬ್ಲಿಕ್ನಲ್ಲಿ ನೇಣಿಗೆ ಹಾಕಿ” ಎಂದು ಸವಾಲು ಹಾಕಿದ್ದರು.