ಬೆಂಗಳೂರು: ಬಿಜೆಪಿ ಮಾಡುತ್ತಿರುವುದು ವಿಜಯಸಂಕಲ್ಪದ ಯಾತ್ರೆಯಲ್ಲ, ಭ್ರಷ್ಟಾಚಾರದ ಸಂಕಲ್ಪದ ಯಾತ್ರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆ.ಪಿ ನಡ್ಡಾ ಹಾಗೂ ರಾಜ್ಯದ ಬಿಜೆಪಿ ನಾಯಕರು ಸೇರಿಕೊಂಡು ಮಾಡುತ್ತಿರುವ ಯಾತ್ರೆಗೆ 40 ಪರ್ಸೆಂಟ್ ಸಂಕಲ್ಪ ಯಾತ್ರೆ ಎಂದು ಹೆಸರಿಟ್ಟರೆ ಸಾರ್ಥಕವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಆ ಪಕ್ಷದ ಮಾತು ನಂಬಬಾರದು ಎಂದು ನಾಡಿನ ಜನತೆಗೆ ಬಹಿರಂಗ ಮನವಿ ಮಾಡಿದ್ದಾರೆ. ಪ್ರಧಾನಿಯಾದಿಯಾಗಿ ಬಹುತೇಕ ಬಿಜೆಪಿಗರು ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ಹೋದ ಕಡೆಯಲ್ಲೆಲ್ಲ ಭಾಷಣ ಮಾಡುತ್ತಾರೆ. ರಾಜ್ಯದಲ್ಲಿ ನಾಲ್ಕು ಸಾವಿರ ಕೋಟಿ ರೂ. ಕೊಡುತ್ತಿರುವುದಾಗಿ ಸುಳ್ಳು ಹೇಳಲಾಗುತ್ತಿದೆ. ವಾಸ್ತವವಾಗಿ ಕೊಡುತ್ತಿರುವುದು ಎರಡು ಸಾವಿರ ಕೋಟಿ ರೂ. ಮಾತ್ರ ಎಂದು ದೂರಿದ್ದಾರೆ.
ಜೊತೆಗೆ ಸುಳ್ಳು ಉತ್ಪಾದಿಸಿ ಹಂಚುವ ಯಾತ್ರೆ ಹಾಗೂ ಜನರ ಶೋಷಣೆಗೆ, ಹಿಂಸೆಗೆ, ದ್ವೇಷಕ್ಕೆ, ಬೆಲೆ ಏರಿಕೆಗೆ ಮಾಡುತ್ತಿರುವ ಯಾತ್ರೆ ಎಂದು ಹೆಸರಿಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು. ಬಿಜೆಪಿಯು ಅಧಿಕಾರಕ್ಕೆ ಬಂದಾಗಿನಿಂದಲೂ ಜನ ದ್ರೋಹವನ್ನು ಬಿಟ್ಟು ಬೇರೇನು ಮಾಡಿದೆ ಎಂದು ಪ್ರಶ್ನಿಸಿದ್ದಾರೆ.