ರಾಮನಗರ: ಬಿಜೆಪಿಯವರು ನನ್ನನ್ನು ಪ್ರಧಾನಿ ಅಥವಾ ರಾಷ್ಟ್ರಪತಿ ಮಾಡ್ತೀವಿ ಎಂದರೂ ನಾನು ಬಿಜೆಪಿ ಮತ್ತು ಆರ್ಎಸ್ಎಸ್ ಸೇರುವುದಿಲ್ಲ. ನನ್ನ ಹೆಣವೂ ಅವರೊಂದಿಗೆ ಹೋಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಬಿಜೆಪಿ ಹಿಂದೂ ವಿರೋಧಿ ಎಂದು ಹೇಳುತ್ತಿದೆ. ಸಿ.ಟಿ.ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಎನ್ನುತ್ತಿದ್ದಾರೆ ಎಂದು ಕಿಡಿ ಕಾರಿದರು.
ಜೆಡಿಎಸ್ಗೆ ಯಾವುದೇ ಸಿದ್ಧಾಂತ ಅಥವಾ ಅರ್ಹತೆ ಇಲ್ಲ. ಅಧಿಕಾರಕ್ಕಾಗಿ ಯಾರೊಂದಿಗೆ ಬೇಕಾದರೂ ಅವರು ಕೈಜೋಡಿಸುತ್ತಾರೆ ಎಂದು ತಿಳಿಸಿದರು.ಮುಂದೆ ನಾವು ಅಧಿಕಾರಕ್ಕೆ ಬಂದಾಗ ತಿಂಗಳಿಗೆ 10 ಕೆಜಿ ಅಕ್ಕಿ, ಗೃಹಿಣಿಯರಿಗೆ 2,000 ರೂಪಾಯಿ ವೇತನ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ನಮ್ಮ ಸರ್ಕಾರ ಎಲ್ಲರಿಗೂ ಆಹಾರ ಭದ್ರತೆ ನೀಡಿದೆ. ಬಿಜೆಪಿಗೆ ಈ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಾನು ಅನ್ನಭಾಗ್ಯ ಯೋಜನೆ ಜಾರಿಮಾಡಿದೆ. ಬಸವಜಯಂತಿಯಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಸಮಯದಲ್ಲಿ ಆಹಾರ ಭದ್ರತೆ ಯೋಜನೆಗೆ ಸಹಿ ಹಾಕಿದೆ ಎಂದರು.