ಹಾಸನ: ಒಂದು ವೇಳೆ ನಾವು ಕೊಟ್ಟಿರುವ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಂಡು ಮನೆಗೆ ಹೋಗುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ಮಾವೇಶದಲ್ಲಿ ಮಾತನಾಡಿ, ಈ ಬಾರಿ ನಮ್ಮ ಸರ್ಕಾರ ಬಂದೇ ಬರುತ್ತದೆ. ಜೆಡಿಎಸ್ನವರು ಗೆದ್ದೆತ್ತಿನ ಬಾಲ ಹಿಡಿಯುವವರು, ಯಾವತ್ತೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ. ಅವರಿಗೆ ಮತ ಕೊಟ್ಟರೆ ಬಿಜೆಪಿಗೆ ಮತ ಕೊಟ್ಟ ಹಾಗೆ ಎಂದು ಹೇಳಿದರು.ಅಧಿಕಾರ ಕೊಡಲಿಲ್ಲ ಎಂದರೆ ಜೆಡಿಎಸ್ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳ್ತಿದ್ದಾರೆ. ಈಗಲೇ ಪಕ್ಷ ವಿಸರ್ಜನೆ ಮಾಡಿಬಿಡಪ್ಪಾ, ಜನ ಏನ್ ಜೆಡಿಎಸ್ ಬೇಕು ಬೇಕು ಎನ್ನುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಸರ್ಕಾರ ರೈತರು, ಬಡವರು, ಹಿಂದುಳಿದ ವರ್ಗ, ದಲಿತರ, ಯುವಕರ, ಮಹಿಳೆಯರ ವಿರೋಧಿ ಸರ್ಕಾರವಾಗಿದೆ. ಅದಕ್ಕಾಗಿ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದಾರೆ. ಕುಮಾರಸ್ವಾಮಿ ತಮಟೆ ಹೊಡೆದುಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಒಬ್ಬ ಶಾಸಕ ಇಲ್ಲದೆ ಇದ್ದರೂ ಬದಲಾವಣೆ ತರುತ್ತೇನೆ ಎಂದು ಹೊರಟಿದ್ದೀರಲ್ಲಾ, ನಿಮಗೆ ಎಷ್ಟು ನಮಿಸಿದರೂ ಸಾಲದು. ರಾಜಕೀಯ, ಆರ್ಥಿಕವಾಗಿ ಏನೆಲ್ಲಾ ಕಷ್ಟ ಅನುಭವಿಸುತ್ತಿದ್ದೀರಿ. ಅದನ್ನು ಕೇಳುವುದೇ ಈ ಯಾತ್ರೆಯ ಉದ್ದೇಶ , ನಾವು ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್ ಕೊಡಲು ತೀರ್ಮಾನಿಸಿದ್ದೇವೆ ಎಂದರು.