ಚಿಕ್ಕಬಳ್ಳಾಪುರ: ಸುಧಾಕರ್ ಮತ್ತೆ ಶಾಸಕ ಆಗಬಾರದು, ನಿಮಗೆ ದಮ್ಮಯ್ಯ ಅಂತೀನಿ ಸುಧಾಕರ್ನನ್ನು ಸೋಲಿಸಿ. ಜನರು ಯಾರಿಗೆ ಹೇಳುತ್ತೀರೋ ಅವರಿಗೆ ಟಿಕೆಟ್ ಕೊಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಎತ್ತಿನಹೊಳೆ ಯೋಜನೆ ಮತ್ತು ಎಚ್.ಎನ್.ವ್ಯಾಲಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಆದರೆ ಇದೆಲ್ಲವನ್ನೂ ನಾವು ಮಾಡಿದ್ದು ಎಂದು ಸುಧಾಕರ್ ಹೇಳುತ್ತಾನೆ. ಆದರೆ ಸುಧಾಕರ್ ಮಾಡಿದ್ದು ಒಂದೇ ಕೆಲಸ ಅದು ಲೂಟಿ ಮಾತ್ರ. ಕೆಲಸ ಮಾಡುವುದು ನಾವು ಕಮಿಷನ್ ಹೊಡೆದಿದ್ದು ಸುಧಾಕರ್ ಎಂದು ವಾಗ್ದಾಳಿ ನಡೆಸಿದರು.
ಹೇಳಿ ಕೇಳಿ ಸುಧಾಕರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದ ನಂತರ ಪಕ್ಷ ತೊರೆದು ಕೇಸರಿ ಪಡೆ ಸೇರಿದವರು, ಡಾ.ಕೆ.ಸುಧಾಕರ್ ಒಬ್ಬ ಫ್ರಾಡ್, ಅವರಿಗೆ ಟಿಕೆಟ್ ನೀಡಬೇಡಿ ಎಂದು ವೀರಪ್ಪ ಮೊಯ್ಲಿ ಹೇಳಿದ್ದರು. ಆದರೂ ನಾವು ಟಿಕೆಟ್ ನೀಡಿದ್ದೆವು. ಆದರೆ ಇಂದು ಸುಧಾಕರ್ಗೆ ಟಿಕೆಟ್ ನೀಡಿದ್ದಕ್ಕೆ ಇಂದು ಪಶ್ಚಾತ್ತಾಪ ಪಡುತ್ತಿದ್ದೇವೆ ಎಂದರು.
ಇನ್ನೂ ಭಾಷಣ ಮಾಡುವ ಅಬ್ಬರದಲ್ಲಿ ಸಿದ್ದರಾಮಯ್ಯ ಸುಧಾಕರ್ ರನ್ನು ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಇತಿಹಾಸದಲ್ಲಿ ಭ್ರಷ್ಟ ಮುಖ್ಯಮಂತ್ರಿ ಇದ್ದರೆ ಅದು ಮುಖ್ಯಮಂತ್ರಿ ಸುಧಾಕರ್ ಎಂದು ಹೇಳಿಕೆ ನೀಡಿದ್ದಾರೆ. ಬಾಯಿತಪ್ಪಿ ಮಂತ್ರಿ ಎನ್ನುವ ಬದಲು ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದಾರೆ.