ಮಂಡ್ಯ: ಚುನಾವಣೆಗೆ ನಿಲ್ಲಬೇಕು ಎಂಬುದು ಅಷ್ಟು ಸುಲಭವಾದ ವಿಚಾರವಲ್ಲ. ಅದೊಂದು ದೊಡ್ಡ ನಿರ್ಧಾರವಾಗುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಚುನಾವಣೆಗೆ ಎಷ್ಟು ದಿನವಿದೆ ಎನ್ನುವುದು ಮುಖ್ಯವಲ್ಲ. ಆದರೆ ಅನುಕೂಲಕರ ವಾತಾವರಣ ಎಷ್ಟಿದೆ ಎಂಬುವುದು ಮುಖ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಬಲಿಗರು ಸಭೆ ನಡೆಸಿರೋ ಬಗ್ಗೆ ಗೊತ್ತಿಲ್ಲ, ಪುತ್ರ ಅಭಿಷೇಕ್ ಚುನಾವಣೆಗೆ ಸ್ಪರ್ಧೆ ಮಾಡೋದು ಅವನಿಗೆ ಬಿಟ್ಟದ್ದು ಎಂದು ತಿಳಿಸಿದರು.
ಪಕ್ಷ ಸೇರುವ ಬಗೆಗೆ ಆಗಲಿ, ಚುನಾವಣೆಗೆ ನಿಲ್ಲುವ ಬಗೆಗೆ ಆಗಲಿ ನಾನು ಮತ್ತೊಮ್ಮೆ ಜನಾಭಿಪ್ರಾಯವನ್ನು ಕೇಳುತ್ತೇನೆ. ಒಂದು ನಿರ್ಧಾರವನ್ನು ತೆಗೆದುಕೊಂಡಾಗ ಅದಕ್ಕೆ ವಿರೋಧ ಎನ್ನವುದು ಇದ್ದೇ ಇರುತ್ತದೆ. ಹಾಗಾಗಿ ಎಲ್ಲರ ಅಭಿಪ್ರಾಯವನ್ನು ಪಡೆಯಲು ಆಗುವುದಿಲ್ಲ. ಸಮಯ ಬಂದಾಗ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದರು.
ಅಂಬರೀಷ್ ಕುಟುಂಬ ಮೈಸೂರಿನಲ್ಲಿದ್ದಾರೆ, ಮೈಸೂರು- ಬೆಂಗಳೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡುವಂತೆ ನಾನೇ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ. ರಾಜಕಾರಣಕ್ಕೆ ಬರುವಂತೆ ಬಿಜೆಪಿ ಕಾಂಗ್ರೆಸ್ ಪಕ್ಷಗಳು ನನಗೆ ಆಹ್ವಾನವನ್ನು ನೀಡಿದೆ. ಆ ಪಕ್ಷದ ನಾಯಕರು ನನ್ನ ಜೊತೆ ಈ ಕುರಿತು ಮಾತನಾಡಿದ್ದಾರೆ. ದಶಪಥ ಹೆದ್ದಾರಿ ಉದ್ಘಾಟನೆ ವೇಳೆ ಸಂಸದೆಯಾಗಿ ಪ್ರಧಾನಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.