ಬೆಂಗಳೂರು: ವಿದ್ಯಾರ್ಥಿಗಳನ್ನು ವಿಶ್ವಮಾನವನನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರದ್ದು ಉತ್ತಮ ಪ್ರಜೆಗಳ ತಯಾರು ಮಾಡುವಂತಹ ವೃತ್ತಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಶಿಕ್ಷಣ ದಿನಾಚರಣೆ ಹಿನ್ನೆಲೆ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಶಿಕ್ಷಕರ ವೃತ್ತಿ ಅತ್ಯಂತ ಜವಾಬ್ದಾರಿಯುತ ವೃತ್ತಿ ಎಂದಿದ್ದಾರೆ.
ಶಿಕ್ಷಕರ ವೃತ್ತಿ ಬಹಳ ಶ್ರೇಷ್ಠವಾದ ವೃತ್ತಿ, ನಾನು ವಕೀಲನಾಗಿದ್ದಾಗ ವಕೀಲ ವಿದ್ಯಾರ್ಥಿಗಳಿಗೆ ಪಾಠ ಮಾಡ್ತಿದ್ದೆ, ಶಾಸಕನಾಗಿ ಆಯ್ಕೆಯಾದ ಬಳಿಕ ಪಾಠ ಮಾಡುವುದನ್ನು ಬಿಟ್ಟೆ. ಶಿಕ್ಷಕ, ರೈತ, ಸೈನಿಕ ಸಮಾಜದಲ್ಲಿ ಬಹಳ ಗೌರವ ತರುವ ವೃತ್ತಿ. ಒಳ್ಳೆಯ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ನೆನಪಿಟ್ಟುಕೊಳ್ಳುತ್ತಾರೆ. ನನ್ನ ಗ್ರಾಮಕ್ಕೆ ರಾಜಪ್ಪ ಎಂಬ ಶಿಕ್ಷಕರು ಬರದೇ ಹೋಗಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ ಎಂದು ಸಿಎಂ ತಮ್ಮ ವಿದ್ಯಾರ್ಥಿ ಜೀವನ ನೆನಪು ಮಾಡಿಕೊಂಡರು.
ಇದನ್ನೂ ಓದಿ: ಕಾವೇರಿ ಜಲ ವಿವಾದ : ಬಿಜೆಪಿಯಿಂದ ರಾಜ್ಯಪಾಲರಿಗೆ ರಕ್ತದಲ್ಲಿ ಪತ್ರ ಚಳುವಳಿ
ಶೂದ್ರರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಯುವ ಅವಕಾಶವಿರಲಿಲ್ಲ. ಆದ್ರೆ ಪರಿಸ್ಥಿತಿ ಈಗ ಬದಲಾಗಿದೆ ಎಲ್ಲರಿಗೂ ಶಿಕ್ಷಣ ಎನ್ನುವುದು ಸಂವಿಧಾನದ ಅಡಿ ಸಿಗುತ್ತಿದೆ. ಹೀಗಾಗಿ ಸಂವಿಧಾನದ ರಕ್ಷಣೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವು ಮಾಡಿಸಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ದ್ವೇಷಿಸಬಾರದು. ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಅಗತ್ಯವಿದೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.