ಬೆಂಗಳೂರು: ಭೂಮಿ ಖರೀದಿಸುವ ಚಿಂತೆಯಲ್ಲಿದ್ದವರಿಗೆ ರಾಜ್ಯ ಸರ್ಕಾರ ಕಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಭೂಮಿಯ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಿ ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ. ಶೇ 30ರಷ್ಟು ಮಾರ್ಗಸೂಚಿ ದರ ಹೆಚ್ಚಳವಾಗಲಿದ್ದು, ಅಕ್ಟೋಬರ್ 1ರಿಂದ ಈ ಪರಿಷ್ಕೃತ ದರ ಜಾರಿಯಾಗಲಿದೆ.
ಅದರಂತೆ ಕೃಷಿ ಜಮೀನು, ನಿವೇಶನ ಸೇರಿದಂತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಆಯಾ ಪ್ರದೇಶಗಳಲ್ಲಿನ ಭೂಮಿಯ ಬೇಡಿಕೆ, ಅಭಿವೃದ್ಧಿ ದರ ಆಧರಿಸಿ ಸರ್ಕಾರ ಹೆಚ್ಚಳ ಮಾಡಿದೆ.
ಕೆಲವೆಡೆ ಈ ದರವು ಶೇ 40ರಿಂದ 50ರಷ್ಟು ಆಗಿದ್ದರೆ, ಕೆಲವೆಡೆ ಶೇ 20ರಷ್ಟು ಏರಿಕೆ ಮಾಡಲಾಗಿದೆ. ಒಟ್ಟಾರೆ ಸರಾಸರಿಯಾಗಿ ಶೇ 30ರಷ್ಟು ಏರಿಕೆ ಮಾಡಲಾಗಿದೆ. ಇದು ಕಳೆದ ಒಂದು ದಶಕದಲ್ಲೇ ಗರಿಷ್ಠ ದರ ಏರಿಕೆ ಎಂದು ಹೇಳಲಾಗಿದೆ.
ಇನ್ನು ಹೊಸ ಮಾರ್ಗಸೂಚಿ ದರಕ್ಕೆ ಅಧಿಸೂಚನೆ ಹೊರಡಿಸಿದ 15 ದಿನಗಳೊಳಗೆ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿದೆ.
ಕೊಳಗೇರಿಗಳಲ್ಲಿ ದರ ಏರಿಕೆ ಇಲ್ಲ: ಕೊಳಗೇರಿ ಪ್ರದೇಶಗಳು ಹಾಗೂ ಬೆಂಗಳೂರಿನಂತಹ ಮಹಾನಗರಗಳ ಅಪಾರ್ಟ್ಮೆಂಟ್ಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಕಂದಾಯ ಇಲಾಖೆ ಕೈಹಾಕಿಲ್ಲ. ಕೊಳಚೆ ಪ್ರದೇಶಗಳಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ದರ ಏರಿಕೆಯು ಅವರಿಗೆ ಭಾರವಾಗಲಿದೆ. ಇನ್ನು ಅಪಾರ್ಟ್ಮೆಂಟ್ಗಳ ದರವೂ ಈಗಾಗಲೇ ಹೆಚ್ಚಿಸಿರುವುದರಿಂದ ಮತ್ತೆ ಅದರನ್ನು ಪರಿಷ್ಕರಿಸಿಲ್ಲ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಂಗಿಲ್ಲ: ಬಿಬಿಎಂಪಿ
ಈ ದರ ಪರಿಷ್ಕರಣೆಯಿಂದ ಮುಂಬರುವ ದಿನಗಳಲ್ಲಿ ರೈತರಿಗೆ ಲಾಭವಾಗಲಿದ್ದು, ಮಧ್ಯಮ ವರ್ಗದ ಜನರು ಭೂಮಿ ಖರೀದಿಗೆ ಮುಂದಾದರೆ ದುಬಾರಿ ಬಿಸಿ ಸುಡಲಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.