ನವದೆಹಲಿ : ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಹಾಗೂ ವಿವಿಪ್ಯಾಟ್ (ವೋಟರ್-ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಗಳಲ್ಲಿ ಚಲಾವಣೆಯಾದ ಮತಗಳನ್ನು ತುರ್ತಾಗಿ ತಾಳೆ ಮಾಡಲು ನಿರ್ದೇಶನ ನೀಡುವಂತೆ ಸಲ್ಲಿಸಿರುವ ಅರ್ಜಿಯನ್ನು ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಕುರಿತು ಅರ್ಜಿದಾರರೊಬ್ಬರು ಪ್ರಕರಣವೊಂದರ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸಲು ನಿರಾಕರಿಸಿರುವ ಕೋರ್ಟ್, ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಬಾರದೆಂದು ಅರ್ಜಿದಾರರಿಗೆ ತಿಳಿ ಹೇಳಿ, ವಿಚಾರಣೆಯನ್ನು ನವೆಂಬರ್ನಲ್ಲಿ ನಡೆಸುವುದಾಗಿ ಮುಂದೂಡಿದೆ.
ಇದನ್ನೂ ಓದಿ : ಲೋಕಸಭೆಗೆ ಅಖಿಲೇಶ್ ಸಜ್ಜು; ಎಲ್ಲಾ ಘಟಕಗಳಿಗೂ ಹೊಸ ಪದಾಧಿಕಾರಿಗಳ ನೇಮಕ
ಎಡಿಆರ್ (ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಸಲ್ಲಿಸಿದ್ದ ಅರ್ಜಿಯ ಕುರಿತು ತಿಳಿಸಿರುವ ಸುಪ್ರೀಂಕೋರ್ಟ್, ಇಂತಹ ಪ್ರಕರಣಗಳ ಕುರಿತು ನ್ಯಾಯಾಲಯದ ಎದುರು ಆರು ತಿಂಗಳಿಗೊಮ್ಮೆ ತಕರಾರುಗಳು ಬರುತ್ತಿವೆ. ಅವುಗಳನ್ನೆಲ್ಲ ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದೆ.
ನಿರಂತರವಾಗಿ ಚುನಾವಣಾ ಪ್ರಕ್ರಿಯೆಗಳನ್ನು ಅನುಮಾನಿಸುವ ರೀತಿಯ ಅರ್ಜಿಗಳು ದಾಖಲಾಗುತ್ತಿದ್ದು, ಅವುಗಳನ್ನೆಲ್ಲ ಸರಿಯಾದ ಸಮಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಅಭಿಪ್ರಾಯ ಪಟ್ಟಿದೆ.
ಇದು ಅಪರಾಧಿಕ ಹಿನ್ನೆಲೆಯ ಪ್ರಕರಣವಲ್ಲ. ಯಾವುದೇ ಸಮಯದಲ್ಲಿ ಉಪಚುನಾವಣೆಗಳು ನಡೆದರೆ ನಡೆಯಲಿ ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿದೆ.
ಎಡಿಆರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್, ನವೆಂಬರ್ನಲ್ಲಿ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಹೀಗಾಗಿ ಎರಡು ವಾರಗಳ ಬಳಿಕ ಅರ್ಜಿಯ ತ್ವರಿತಗತಿಯ ವಿಚಾರಣೆಗಾಗಿ ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿರುವ ನ್ಯಾಯಲಯ ವಿಚಾರಣೆ ಮುಂದೂಡಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.