ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಮೋದಿ ಚಾಲನೆ ನೀಡಲಿದ್ದು, ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.
ಜನವರಿ 11 ಮತ್ತು 12ರಂದು ಮಧ್ಯಾಹ್ನ 01ರಿಂದ ಸಂಜೆ 7 ಗಂಟೆವರೆಗೆ ಗೋಕುಲ ರಸ್ತೆ ಮಾಪ್ಸಲ್ ಡಿಪೋದಿಂದ ಸಿದ್ದೇಶ್ವರ ಪಾರ್ಕ್, ಶಿರೂರ ಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರ ರಸ್ತೆ, ಭಗತಸಿಂಗ್ ವೃತ್ತ, ಪ್ರವಾಸಿ ಮಂದಿರ ಎದುರು (ಐಬಿ), ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್, ರೈಲ್ವೆ ಮೈದಾನದ ಯುವಜನೋತ್ಸವ ಕಾರ್ಯಕ್ರಮ ಸ್ಥಳದವರೆಗೆ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.
ಯುವಜನೋತ್ಸವ ಕಾರ್ಯಕ್ರಮದಲ್ಲಿ ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿಂದ ಯುವಕರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನಾ ದಿನ ನಾಳೆ ಯುವಕರ ಕುರಿತ ಎಲ್ಲ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ.
ಧಾರವಾಡದಿಂದ ಬರುವ ಲಘು ವಾಹನಗಳು ಪ್ರೆಸಿಡೆಂಟ್ ಹೋಟೆಲ್ ಮುಖಾಂತರ ಸಾಯಿನಗರ, ಜೆ.ಕೆ ಸ್ಕೂಲ್, ಗೋಪನಕೊಪ್ಪ ಮೂಲಕ ಕೇಶ್ವಾಪುರ ಅಥವಾ ಕುಸುಗಲ್ ಮೂಲಕ ಹಾಯ್ದು ಹೋಗಬೇಕು. ಧಾರವಾಡದಿಂದ ಬರುವ ಭಾರಿ ವಾಹನಗಳು ನವನಗರ ಒಳಗೆ ಹಾಯ್ದು, ಗಾಮನಗಟ್ಟಿ ಕೈಗಾರಿಕಾ ವಸಾಹತು ಮೂಲಕ ತಾರಿಹಾಳ ಬೈಪಾಸ್ ತಲುಪಬೇಕು. ನವಲಗುಂದ, ಗದಗ ಕಡೆಯಿಂದ ಬರುವ ಭಾರಿ ವಾಹನಗಳಿಗೆ ನಗರದಲ್ಲಿ ಸಂಚಾರ ನಿಷೇಧಿಸಲಾಗಿದ್ದು, ರಿಂಗ್ ರಸ್ತೆ ಮೂಲಕ ಸಂಚರಿಸಬೇಕು ಎಂದು ತಿಳಿಸಿದ್ದಾರೆ.