ಬೆಂಗಳೂರು: ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತೀವ್ರವಾಗಿ ಚರ್ಚೆ ನಡೆಯುತ್ತಿದ್ದು ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಸಮಯದಲ್ಲೇ ತುಷಾರ್ ಗಿರಿನಾಥ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬೆಂಗಳೂರಿನ ಕನ್ನಿಂಗ್ಹ್ಯಾಂ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ತುಷಾರ್ ಗಿರಿನಾಥ್ ಅವರು ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದರು. ಇದರ ಜೊತೆಗೆ ಕಳೆದ ಶನಿವಾರದಿಂದ ಹೊಟ್ಟೆ ನೋವು ಕಾಣಿಸಿಕೊಂಡಿತ್ತು.
ಪರಿಶೀಲನೆಗೆ ಒಳಪಡಿಸಿದಾಗ ಯೂರಿನರಿ ಇನ್ಫೆಕ್ಷನ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲೇ ಔಷಧ ಹಾಗೂ ಇಂಜೆಕ್ಷನ್ ನೀಡಲಾಗಿತ್ತು. ಆದರೂ ಜ್ವರ ಕ್ಷೀಣಿಸದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತುಷಾರ್ ಗಿರಿನಾಥ್ ಆಪ್ತರು ಮಾಹಿತಿ ನೀಡಿದ್ದಾರೆ. ಮಣಿಪಾಲ್ ಆಸ್ಪತ್ರೆಗೆ ಸಚಿವ ವಿ ಸೋಮಣ್ಣ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು, ನಂತರ ವೈದ್ಯರ ಬಳಿ ಮಾಹಿತಿ ಪಡೆದರು.
ಇನ್ನೂ ಚಿಲುಮೆ ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಮಾಡಲಾಗುವುದು ಎಂಬ ವದಂತಿ ಹಬ್ಬಿದೆ. ವದಂತಿ ಬೆನ್ನಲ್ಲೆ ತುಷಾರ್ ಗಿರಿನಾಥ್ ಅವರನ್ನು ವರ್ಗಾವಣೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಎಚ್ಚರಿಕೆ ನೀಡಿದೆ.