ಬೆಂಗಳೂರು: ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ, ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ ಎಂದು ವಿ ಸೋಮಣ್ಣ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಒಂದೊಂದು ಬಾರಿ ಒಳ ಏಟುಗಳು ಆದಾಗ ಇದೆಲ್ಲಾ ಆಗುತ್ತದೆ. ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರತಿದಿನ ಬಿ ಎಸ್ ಯಡಿಯೂರಪ್ಪರವರು ಕರೆ ಮಾಡುತ್ತಿದ್ದರು. ಆದರೆ, ಚುನಾವಣೆ ಮುಗಿದ ಇದುವರೆಗೂ ನನಗೆ ಕರೆ ಮಾಡಿಲ್ಲ. ಚಿನ್ನದಂಥ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ ಎಂದು ಹೇಳಿದರು.
ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಜೊತೆಗೆ ಪಕ್ಷ ಹೇಳಿದ್ದನ್ನು ನಾನು ಮಾಡದೆ ಇನ್ಯಾರು ಮಾಡಲು ಆಗುತ್ತೆ?, ಪಕ್ಷ ನನಗೆ ಟಾಸ್ಕ್ ಕೊಟ್ಟ ಮೇಲೆ ತಿರುಗಿಯೂ ನೋಡಲಿಲ್ಲ. ಗೋವಿಂದರಾಜನಗರ ಕಣ್ಣು, ಕಿವಿ, ಹೃದಯ ಎಲ್ಲವೂ ಆಗಿತ್ತು ಎನ್ನುವ ಮೂಲಕ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ವರುಣಾ ಕ್ಷೇತ್ರದಲ್ಲಿಯೂ ಸೋಮಣ್ಣ ಅವರಿಗೆ ಸೋಲಾಗಿದ್ದು, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರು 30,019 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಎರಡು ಕ್ಷೇತ್ರಗಳಿಂದ ಸೋಮಣ್ಣ ಅವರನ್ನು ಕಣಕ್ಕಳಿಸಿ ತಂತ್ರ ರೂಪಿಸಿದ್ದ ಬಿಜೆಪಿಗೆ ಮುಖಭಂಗವಾಗಿದೆ. ಚಾಮರಾಜನಗರ ಹಾಗೂ ವರುಣಾ ಎರಡೂ ಕ್ಷೇತ್ರಗಳಲ್ಲಿಯೂ ವಿ.ಸೋಮಣ್ಣ ಸೋಲು ಕಂಡಿದ್ದಾರೆ.