ವಿಜಯನಗರ : ಇಲ್ಲಿನ ನಗರಸಭೆಯ ಕಡತಗಳು ನಾಪತ್ತೆಯಾದ ಪ್ರಕರಣದಲ್ಲಿ ನಾಲ್ಕು ಜನರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಕಚೇರಿ ಅಧೀಕ್ಷಕರನ್ನು ಸೇವೆಯಿಂದ ಅಮಾನತು ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ ಆಧಾರದ ಮೇಲೆ ಹಲವರನ್ನು ತಾತ್ಕಾಲಿಕವಾಗಿ ಸೇವೆಯಿಂದ ದೂರವಿಡಲಾಗಿದೆ. ಮೊದಲು ದಾಖಲೆಗಳು ಇಲ್ಲ ಎಂದು ಹೇಳಿ, ಬಳಿಕ ದಾಖಲೆಗಳು ಇವೆ ಎಂದು ಹೇಳಿದ್ದಾರೆ. ಹೀಗಾಗಿ ಪೌರಾಯುಕ್ತರು ಸಲ್ಲಿಸಿದ್ದ ವರದಿಯ ಮೇಲೆ ನಾನು ಶಿಸ್ತು ಕ್ರಮ ಕೈಗೊಂಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ : ಬಿಸಿ ಪಾಟೀಲ್, ರಾಜುಗೌಡ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಗುಪ್ತ ಮಾತುಕತೆ!
ಕಡತಗಳ ಜವಾಬ್ದಾರಿಯನ್ನು ವಹಿಸಬೇಕಾದವರು ನಮ್ಮ ಸಿಬ್ಬಂದಿಯವರೇ, ಮೇಲುಸ್ತುವಾರಿಗಳೇ ಹಾಗೂ ನಗರಸಭೆ ಪೌರಾಯುಕ್ತರೆ ಆಗಿರುತ್ತಾರೆ. ಈ ಕಾರಣಕ್ಕಾಗಿ ನಾವು ನಮ್ಮ ಸಿಬ್ಬಂದಿಗಳನ್ನು ಅಮಾನತು ಮಾಡಿದ್ದೇವೆ. ಹೊರಗಿನವರು ನಮಗೆ, ಯಾವುದೇ ರೀತಿಯಲ್ಲಿ ಲೆಕ್ಕಕ್ಕೆ ಬರುವುದಿಲ್ಲ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ : ಮಾಜಿ ಸಚಿವ ಆನಂದ್ ಸಿಂಗ್ ಅವರ ಅಳಿಯ ಸಂದೀಪ್ ಸಿಂಗ್ ಮತ್ತು ಇತರರು ದರ್ಪ ತೋರಿಸಿ 6-7 ತಿಂಗಳ ಹಿಂದೆ ನಗರಸಭೆಯ 49 ಕಡತಗಳನ್ನು ಬಲವಂತವಾಗಿ ಸಾಗಿಸಿದ್ದಾರೆ. ಅವುಗಳನ್ನು ವಾಪಸ್ ತಂದು ಕೊಟ್ಟಿಲ್ಲ ಎಂದು ನಗರಸಭೆಯ ವಾಲ್ ಮ್ಯಾನ್ ಸುರೇಶ್ ಬಾಬು, ಆಗಸ್ಟ್ 10 ರಂದು ಮುಖ್ಯಮಂತ್ರಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದರು. ಇದರ ಒಂದು ಪ್ರತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಗೂ ನೀಡಿದ್ದರು.
ಈ ಸಂಬಂಧ ಆಗಸ್ಟ್ 19ರಂದು ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದ ಕರವೇ, ಆಗಸ್ಟ್ 22ರಂದು ಸಾರ್ವಜನಿಕರ ಸಮಕ್ಷಮದಲ್ಲಿ ಎಲ್ಲಾ ಕಡತಗಳನ್ನು ಪರಿಶೀಲನೆ ನಡೆಸುವಂತೆ ಕೋರಿತ್ತು. ಈ ಹಿನ್ನೆಲೆ ಆಗಸ್ಟ್ 22ರಂದು ಕಡತಗಳನ್ನು ಪರಿಶೀಲಿಸಿದಾಗ ಹಲವು ಕಡತಗಳು ನಾಪತ್ತೆಯಾಗಿರುವುದು ಕಂಡು ಬಂದಿತ್ತು.
ಕಡತ ನಾಪತ್ತೆ ಆರೋಪ ಹಿನ್ನೆಲೆ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್ ನಗರಸಭೆ ಆಯುಕ್ತರಿಂದ ಪ್ರಕರಣದ ವರದಿ ಕೇಳಿದ್ದರು. ಜಿಲ್ಲಾಧಿಕಾರಿಗೆ ಕೊಟ್ಟ ವರದಿಯಲ್ಲಿ ಕೆಎಂಎಫ್ 24 ಡಿಮ್ಯಾಂಡ್ ಬುಕ್ ಇಲ್ಲ ಎಂದು ಆಯುಕ್ತರು ಹೇಳಿದ್ದರು. ಮೊದಲು ಕಡತಗಳು ಇದೆ ಎಂದು, ಬಳಿಕ ಕಡತ ಇಲ್ಲ ಎಂದು ಹೇಳುವ ಮೂಲಕ ನಗರಸಭೆಯ ಸಿಬ್ಬಂದಿ ತಪ್ಪು ಮಾಡಿರುವುದು ಸಾಬೀತಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದರು. ವಾಲ್ ಮ್ಯಾನ್ ಸುರೇಶ್ ಬಾಬು, ನೈರ್ಮಲ್ಯ ಮೇಸ್ತ್ರಿ ಎನ್.ಯಲ್ಲಪ್ಪ, ದ್ವಿತೀಯ ದರ್ಜೆ ಸಹಾಯಕ ಎಸ್.ಸುರೇಶ್, ಕರ ವಸೂಲಿಗಾರ ಹೆಚ್.ಶಂಕರ್, ನಗರಸಭೆ ಕಚೇರಿ ವ್ಯವಸ್ಥಾಪಕ ಕೃಷ್ಣಮೂರ್ತಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.