ಬೆಂಗಳೂರು: ಜನವರಿ 21ರಿಂದ 29ರವರೆಗೆ ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನ ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೆ ಬಿಜೆಪಿಯ ಬೂತ್ ವಿಜಯ ಅಭಿಯಾನ ಮಾಡಲಾಗಿದೆ. 2023ರ ಜನವರಿ 2 ರಿಂದ 10ರ ವರೆಗೂ ರಾಜ್ಯದೆಲ್ಲೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 58 ಸಾವಿರಕ್ಕೂ ಹೆಚ್ಚು ಬೂತ್ ಇದ್ದು, ಎಲ್ಲದರಲ್ಲೂ ಸಮಿತಿ ಮತ್ತು ಪೇಜ್ ಪ್ರಮುಖ್ ನೇಮಕ ಮಾಡಲಾಗಿದೆ. ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಲಾಗಿದೆ. ಸಂಘಟನೆ ಕಟ್ಟುವ ಕೆಲಸ ಯಶಸ್ವಿಯಾಗಿದೆ.
ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವಿಜಯಪುರದ ಸಿಂಧಗಿಯಲ್ಲಿ ಚಾಲನೆ ನೀಡಲಿದ್ದಾರೆ. ವಿಚಾರಗಳನ್ನು ಸವಿಸ್ತಾರವಾಗಿಸಿ, ಪ್ರತೀ ಮನೆ, ವಾಹನಗಳ ಮೇಲೆ ಸ್ಟಿಕರ್ ಅಂಟಿಸಲಾಗುವುದು ಎಂದು ಹೇಳಿದರು.
ಒಂದೆಡೆ ಬಸ್ ಯಾತ್ರೆ, ಬೃಹತ್ ಸಮಾವೇಶಗಳ ಮೂಲಕ ಕಾಂಗ್ರೆಸ್ ಚಟುವಟಿಕೆ ನಡೆಸುತ್ತಿದ್ದರೆ ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ ಸಂಘಟನಾತ್ಮಕ ಚಟುವಟಿಕೆಯತ್ತ ಗಮನಹರಿಸಿದೆ ಎಂದರು.
ರಾಜ್ಯ ಸಚಿವರು, ಕೇಂದ್ರ ಸಚಿವರು, ಲೋಕಸಭೆ ಸದಸ್ಯರು, ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಏಕಕಾಲದಲ್ಲಿ ತೆರಳಿ ಕೆಲಸ ಮಾಡಲಾಗುವುದು. ಒಂದು ಕೋಟಿ ಜನರ ಸದಸ್ಯತ್ವ ಮಾಡಿಸುವ ಗುರಿ ಇದೆ. ಪಕ್ಷವನ್ನು ಬಲಿಷ್ಠ ಮಾಡುವ ಕೆಲಸ ಮಾಡಲಾಗುವುದು ಎಂದರು.