ನವದೆಹಲಿ: ರಾಜಸ್ಥಾನದ ಪ್ರತಾಪ್ಗಢ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಆಕೆಯ ಗಂಡನೇ ಬೀದಿಯಲ್ಲಿ ಮೆರವಣಿಗೆ ಮಾಡಿದ ಘಟನೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (National Commission For Womens) ಖಂಡಿಸಿದೆ.
‘ರಾಜಸ್ಥಾನದ ಪ್ರತಾಪ್ಗಢದಲ್ಲಿ ನಡೆದ ಘೋರ ಘಟನೆಯನ್ನು ಎನ್ಸಿಡಬ್ಲ್ಯು ತೀವ್ರವಾಗಿ ಖಂಡಿಸುತ್ತದೆ. ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ವಿವಸ್ತ್ರಗೊಳಿಸಲಾಗಿದೆ. ಸಾಲದ್ದಕ್ಕೆ ವೀಡಿಯೋ ರೆಕಾರ್ಡ್ ಮಾಡಲಾಗಿದೆ. ಇದು ಎರಡು ದಿನಗಳ ಹಿಂದೆಯೇ ನಡೆದಿದ್ದರೂ, ಪೊಲೀಸರ ನಿಷ್ಕ್ರಿಯತೆ ಸ್ವೀಕಾರಾರ್ಹವಲ್ಲ. ತಪ್ಪಿತಸ್ಥರನ್ನು ತ್ವರಿತವಾಗಿ ಬಂಧಿಸಲು ಮತ್ತು ಅಗತ್ಯ ಕಾನೂನು ಕ್ರಮಗಳನ್ನು ಜರುಗಿಸುವಂತೆ ರಾಜ್ಯದ ಡಿಜಿಪಿಗೆ ಸೂಚನೆ ನೀಡಲಾಗಿದೆ. ಐದು ದಿನಗಳ ಒಳಗೆ ನಾವು ಸಮಗ್ರ ವರದಿಯನ್ನು ಕೋರುತ್ತೇವೆ’ ಎಂದು ಆಯೋಗದ ಅಧ್ಯಕ್ಷೆ ಶರ್ಮರೇಖಾ ಹೇಳಿದ್ದಾರೆ.
ಇದನ್ನೂ ಓದಿ; ಮಹಿಳೆ ವಿವಸ್ತ್ರಗೊಳಿಸಿ ಮೆರವಣಿಗೆ; ರಾಜಸ್ಥಾನ ಸಿಎಂ ವಿರುದ್ಧ ಜೆಪಿ ನಡ್ಡಾ ವಾಗ್ದಾಳಿ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಮಹಿಳೆಯ ಪತಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ತಿಳಿಸಿದ್ದಾರೆ.
ಪ್ರಕರಣದಲ್ಲಿ ಒಟ್ಟು ಹತ್ತು ಮಂದಿ ಆರೋಪಿಗಳಿದ್ದಾರೆ. ಆರೋಪಿಗಳ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಮಿಶ್ರಾ ತಿಳಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.