ಬಾಗಲಕೋಟೆ : ಉಪಚುನಾವಣೆ ಅಖಾಡ ಕಾವೇರುತ್ತಿದೆ. ಅಭ್ಯರ್ಥಿಗಳ ಪರ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರದ ಪ್ರಚಾರ ನಡೆಸಿದ್ದಾರೆ. ವಿರೋಧ ಪಕ್ಷ ಬಿಜೆಪಿಯನ್ನು ಕಟುವಾಗಿ ಟೀಕಿಸಿದ ಅವರು, ರೈತರಿಗೆ ಅರ್ಥವಾಗುವ ಅಪ್ಪಟ ದೇಸೀ ಶೈಲಿಯಲ್ಲೇ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಕಳ್ಳೆತ್ತುಗಳಿದ್ದಂತೆ. ಕೆಲಸ ಮಾಡದ ಕಳ್ಳೆತ್ತಿಗೆ ಈ ಬಾರಿ ಮತ ಹಾಕಬೇಡಿ. ನೆಲದ ಗುಣ ಅರಿತು ಕೆಲಸ ಮಾಡುವ, ನಾಡಿನ ಹಿತ ಕಾಯುವ ‘ಉಳುವ ಎತ್ತು’ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಆಶೀರ್ವದಿಸಿ,” ಎಂದು ಮನವಿ ಮಾಡಿದರು.
“ನಾನು ಇಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ, ನಿಮ್ಮ ನಡುವಿನ ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಬಂದಿದ್ದೇನೆ,” ಎಂದು ಹೇಳುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದರು.
ಇದನ್ನೂ ಓದಿ : ಬೈ ಎಲೆಕ್ಷನ್ ಸೋತ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕಿತ್ತಾಕೋದು ನಿಶ್ಚಿತ : ಎಂ.ಬಿ.ಪಾಟೀಲ್ ಭವಿಷ್ಯ
ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಅವಧಿಯಲ್ಲಿ ಕೇವಲ ಲೂಟಿ ನಡೆದಿದೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡದ ಬಿಜೆಪಿಯವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಹಕ್ಕಿಲ್ಲ ಎಂದು ಗುಡುಗಿದರು.
ಕ್ಷೇತ್ರದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಜನಪರ ಆಡಳಿತ ನೀಡಲು ಕಾಂಗ್ರೆಸ್ಗೆ ಶಕ್ತಿ ತುಂಬುವಂತೆ ಅವರು ಜನರಲ್ಲಿ ಕೋರಿದರು.