ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಪ್ರಸಿದ್ದ ರಾಮೇಶ್ವರಂ ಕೆಫೆಯಲ್ಲಿ ದೋಸೆ ಸವಿದಿದ್ದಾರೆ.
ಇಂದು ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಆದ ರಾಮೇಶ್ವರಂ ಕೆಫೆಗೆ ಭೇಟಿ ನೀಡಿರುವ ಅಖಿಲೇಶ್ ಯಾದವ್ ಅವರು ಬೆಣ್ಣೆ ದೋಸೆ ಸೇವನೆ ಮಾಡಿದ್ದು, ದೋಸೆಯ ರುಚಿಗೆ ಮಾರು ಹೋಗಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ವೇಳೆ ಅಖಿಲೇಶ್ ಯಾದವ್ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ.
ಈ ಕುರಿತಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಖಿಲೇಶ್ ಅವರು ಹಂಚಿಕೊಂಡಿದ್ದು, ಕರ್ನಾಟಕದ ನೆನಪು, ಹಳೆಯ ಬಂಧ, ಧನ್ಯವಾದಗಳು ಬೆಂಗಳೂರು! ಎಂದು ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.
ಇನ್ನು ಬೆಂಗಳೂರಿಗೆ ಭೇಟಿ ನೀಡಿರುವ ಅಖಿಲೇಶ್ ಅವರು, ಸದಾಶಿವನಗರದಲ್ಲಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರ ನಿವಾಸಕ್ಕೂ ಭೇಟಿ ನೀಡಿದ್ದಾರೆ. ಈ ವೇಳೆ ಅಖಿಲೇಶ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಪರಮೇಶ್ವರ್ ಅವರು, ವಿವಿಧ ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಈ ಕುರಿತಾದ ಫೊಟೋವನ್ನು ಪರಮೇಶ್ವರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಅಧ್ಯಕ್ಷರು ಹಾಗೂ ಸಂಸದರಾದ ಅಖಿಲೇಶ್ ಯಾದವ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿರುವ ನನ್ನ ನಿವಾಸಕ್ಕೆ ಇಂದು ಸಂಜೆ ಸೌಜನ್ಯಯುತ ಭೇಟಿ ನೀಡಿದರು. ಈ ವೇಳೆ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ವಿವಿಧ ವಿಚಾರಗಳ ಕುರಿತು ಚರ್ಚಿಸಿದೆನು ಎಂದು ಹೇಳಿದ್ದಾರೆ.