ಬೆಳಗಾವಿ : ಸಿಎಂ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ಇದೀಗ ಸ್ವಪಕ್ಷದ ಶಾಸಕರ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಕೆ.ಎನ್.ರಾಜಣ್ಣ ಅವರು ಬಿಜೆಪಿ ಸೇರಲು ಅರ್ಜಿ ಹಾಕಿದ್ದಾರೆ. ಅವರು ಯಾವ ಪಕ್ಷದಲ್ಲಿದ್ದಾರೆ ಅನ್ನೋದನ್ನು ಮೊದಲು ಹೇಳಲಿ ಎಂದಿದ್ದ ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಮಾಜಿ ಸಚಿವ ರಾಜಣ್ಣ ಕಿಡಿಕಾರಿದ್ದಾರೆ.
ಅಧಿವೇಶನ ಆರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ನಾನು ಯಾವನಿಂದಲೂ ಕಲಿಯ ಬೇಕಾಗಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ 15 ವರ್ಷದಿಂದ ಇದ್ದೇನೆ. ಅದು ಅವರು ಬಾಲೀಷ ಹೇಳಿಕೆ, ಏನ್ ಬೇಕಿದ್ರು ಹೇಳಿಕೋಳ್ಳಲಿ ಎಂದು ರಾಜಣ್ಣ ಗರಂ ಆದರು.
ಸಿದ್ದರಾಮಯ್ಯ ಅವರು ಹೈಕಮಾಂಡ್ಗೆ ಹೆದರಿಸುವಂತದ್ದಾಗಲಿ ಅಥವಾ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನ ಕೈ ಬಿಡುತ್ತೆ ಅನ್ನೋದಾಗಿ ಇಲ್ಲ. ಪರಮೇಶ್ವರ್ ಅವರನ್ನ ದಲಿತರು ಎನ್ನುವ ಕಾರಣಕ್ಕೆ ಪರಿಗಣಿಸಬೇಕಿಲ್ಲ. 2013ರಲ್ಲಿ ಪರಮೇಶ್ವರ್ ಅಧ್ಯಕ್ಷರಾಗಿ ಪಕ್ಷ ಗೆಲ್ಲಿಸಿದ್ದು, ಅವರ ಕೊಡುಗೆಯೂ ಅಷ್ಟೇ ಇದೆ ಎಂದಿದ್ದಾರೆ.
ಸಿಎಲ್ಪಿ ಲೀಡರ್ ಆಯ್ಕೆ ಆಗಿರೋದು ಐದು ವರ್ಷಕ್ಕೆ ಎಂದ ರಾಜಣ್ಣ ಅವರು, ಡಿಕೆಶಿ ಸಿಎಂ ಆಗ್ತಾರಾ ಎನ್ನುವ ವಿಚಾರಕ್ಕೆ, ರಾಜಕಾರಣ ನಿಂತ ನೀರಲ್ಲ. ಯಾವಾಗ ಏನ್ ಬೇಕಾದ್ರೂ ಆಗಬಹುದು ಬದಲಾವಣೆ, ಚಲನ ಶೀಲವಾಗಿರುತ್ತೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆಯಾ? ಎಂದು ಪ್ರಶ್ನೆ ಮಾಡಿದ ರಾಜಣ್ಣ, ದೆಹಲಿಗೆ ಹೋಗಿ ಅವರು ಸಹ ಬದಲಾವಣೆ ಬಗ್ಗೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿ ಆಗಬೇಕು ಎನ್ನುವವರು ಸಿಎಂ ಆಗಬೇಕು ಎನ್ನುವವರು ಇದ್ದಾರೆ. ಈ ಗೊಂದಲವನ್ನ ಹೈಕಮಾಂಡ್ ಬಗೆಹರಿಸಬೇಕು. ಇಲ್ಲದೇ ಹೋದ್ರೆ ಸರ್ಕಾರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆತಂಕವನ್ನ ರಾಜಣ್ಣ ಹೊರಹಾಕಿದ್ದಾರೆ.
ಸಿಎಲ್ಪಿಯಲ್ಲಿ ವೋಟಿಂಗ್ ಆಗಿ ಆಯ್ಕೆ ನಾಯಕರನ್ನ 5 ವರ್ಷಕ್ಕೆ ಆಯ್ಕೆ ಮಾಡಲಾಗಿದೆ. ರಾಜೀನಾಮೆ ಕೊಟ್ಟರೆ ಮಾತ್ರ ಬದಲಾವಣೆ, ರಾಜೀನಾಮೆ ಕೊಡೊವರೆಗೂ ಸಿಎಂ ಆಗಿ ಸಿದ್ದರಾಮಯ್ಯ ಇರ್ತಾರೆ ಎಂದು ಮಾಜಿ ಸಚಿವ ರಾಜಣ್ಣ ಹೇಳಿದ್ದಾರೆ.