ಬೆಂಗಳೂರು : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ಒಳಜಗಳ ಶುರುವಾಗಿದೆ. ಒಂದು ಕಡೆ ಎಸ್.ಎಸ್.ಮಲ್ಲಿಕಾರ್ಜುನ್ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಹೋರಾಡ್ತಿದ್ದಾರೆ. ಇನ್ನೊಂದು ಕಡೆ ಸಚಿವ ಜಮೀರ್ ಅಹ್ಮದ್ ಮುಸ್ಲೀಂ ಸಮುದಾಯದವರಿಗೆ ಮಣೆ ಹಾಕುವಂತೆ ಲಾಬಿ ಮಾಡ್ತಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್ ಮೇಟ್ ನೀಡಲು ಬಿಜೆಪಿ ತಂತ್ರ ರೂಪಿಸುತ್ತಿದೆ. ಕುರುಬ ಸಮುದಾಯದ ಜಿ.ಬಿ.ವಿನಯ್ ಕುಮಾರ್ ಅವರನ್ನು ಕಣಕ್ಕಿಳಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಲು ತೆರೆಮರೆಯಲ್ಲೇ ರಣತಂತ್ರ ರೂಪಿಸ್ತಿದೆ.
ಈ ಸಂಬಂಧ ಬಿಜೆಪಿ ರಾಷ್ಟ್ರೀಯ ನಾಯಕರು ದೆಹಲಿಯಲ್ಲಿ ವಿನಯ್ ಕುಮಾರ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 2024 ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪ್ರಯತ್ನಿ ವಿಫಲರಾದ ವಿನಯ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 42,907 ಮತಗಳನ್ನು ಗಳಿಸಿದ್ದರು.
ಎಜುಕೇಶನ್ ಅಕಾಡೆಮಿ ನಡೆಸುತ್ತಿರುವ ವಿನಯ್ ಶಿಕ್ಷಕರಾಗಿ ಹೆಸರು ಮಾಡಿದ್ದಾರೆ. ದಾವಣಗೆರೆ ದಕ್ಷಿಣ ಸ್ಥಾನದ ಬಗ್ಗೆ ಬಿಜೆಪಿಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ವಿನಯ್ಗೆ ವರದಾನವಾಗಿದೆ ಎನ್ನಲಾಗಿದೆ. ಮಾಜಿ ಸಚಿವ ಎಂ.ಪಿ.ರೇಣುಚಾರ್ಯ ಮತ್ತು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಬಣಗಳು ಕ್ರಮವಾಗಿ ಬಿ.ಜಿ.ಅಜಯ್ ಕುಮಾರ್ ಮತ್ತು ಯಶವಂತರಾವ್ ಜಾಧವ್ ಅವರ ಹೆಸರುಗಳನ್ನು ಪ್ರಸ್ತಾಪಿಸುವ ಮೂಲಕ ಟಿಕೆಟ್ಗಾಗಿ ಹೋರಾಡುತ್ತಿವೆ. ಆದರೆ ಹೈಕಮಾಂಡ್ ವಿನಯ್ ಕುಮಾರ್ ಅವರನ್ನು ಕಣಕ್ಕಿಳಿಸಿದರೆ ಎರಡೂ ಬಣಗಳು ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.