ಬೆಂಗಳೂರು : ಸಚಿವ ಜಮೀರ್ ಆಹ್ಮದ್ ಖಾನ್ ವಾಪಸ್ ಜೆಡಿಎಸ್ಗೆ ಸೇರುತ್ತಾರೆ ಅನ್ನೋ ವದಂತಿ ದಟ್ಟವಾಗುತ್ತಿರೋ ಬೆನ್ನಲ್ಲೇ ಶಾಸಕ ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಮ್ಮನ್ನು ಜೆಡಿಎಸ್ನಿಂದ ಕಾಂಗ್ರೆಸ್ಗೆ ಕರೆತಂದಿದ್ದೇ ಜಮೀರ್ ಅಹ್ಮದ್. ಈಗ ಅವರೇ ಕಾಂಗ್ರೆಸ್ ಬಿಟ್ಟು ಹೋದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ
ನಗರದಲ್ಲಿ ಮಾತನಾಡಿದ ಅವರು, ಒಂದು ವೇಳೆ ಜಮೀರ್ ಮತ್ತೆ ಜೆಡಿಎಸ್ಗೆ ಹೋಗುವುದೇ ಆದರೆ, ನಮ್ಮನ್ನು ಬಿಟ್ಟು ಹೋಗಬಾರದು. ನಮ್ಮನ್ನೂ ತಮ್ಮ ಜೊತೆಯಲ್ಲೇ ಕರೆದುಕೊಂಡು ಹೋಗಬೇಕು. ಯಾಕಂದ್ರೆ ನಮ್ಮನ್ನ ಜೆಡಿಎಸ್ಗೆ ಕರೆತಂದಿದ್ದೇ ಅವರಲ್ವಾ ಎಂದರು.
ಸಿಎಂಗೆ ಮಾಟ ಮಂತ್ರ ಮಾಡಿಸಿದ್ದು ರಾಜಣ್ಣ..!
ಸಿಎಂ ಸಿದ್ದರಾಮಯ್ಯ ಅವರಿಗೆ ಯಾರೋ ಮಾಟ-ಮಂತ್ರ ಮಾಡಿಸಿರಬಹುದು ಎಂಬ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಯ ಕುರಿತೂ ಬಾಲಕೃಷ್ಣ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲೆ ಮಾಟ-ಮಂತ್ರ ಮಾಡುವ ಶಕ್ತಿ ಇದ್ದರೆ ಅದು ರಾಜಣ್ಣ ಅವರಿಗೆ ಮಾತ್ರ ಇದೆ. ಸಿಎಂ ಮೇಲೆ ಮಾಟ-ಮಂತ್ರ ಮಾಡಲು ಅವರ ಆಪ್ತರಿಗಷ್ಟೇ ಸಾಧ್ಯವೇ ಹೊರತು ಬೇರೆಯವರಿಗೆ ಅದು ಅಸಾಧ್ಯ, ಎಂದು ಲೇವಡಿ ಮಾಡಿದ್ದಾರೆ.
ಮಾಟ ಮಂತ್ರ ಮಾಡಿ ಅಧಿಕಾರ ಕಸಿದುಕೊಳ್ಳುವ ಅಥವಾ ಕೊಡಿಸುವ ಕಾಲ ಈಗ ಮುಗಿದು ಹೋಗಿದೆ. ಈಗ ಅದೆಲ್ಲ ನಡೆಯುವುದಿಲ್ಲ. ಸಿದ್ದರಾಮಯ್ಯ ಅವರು ಇಂದಿಗೂ ಅತ್ಯಂತ ಆಕ್ಟಿವ್ ಆಗಿದ್ದಾರೆ. ನಮಗಂತೂ ಅವರ ಉತ್ಸಾಹದಲ್ಲಿ ಯಾವುದೇ ಇಳಿಕೆ ಕಂಡಿಲ್ಲ. ವಯೋಸಹಜವಾಗಿ ಸಣ್ಣಪುಟ್ಟ ಸಮಸ್ಯೆಗಳಿರಬಹುದು, ಆದರೆ ಆಡಳಿತವನ್ನು ಚುರುಕಾಗಿ ನಡೆಸುವ ಶಕ್ತಿ ಇಂದಿಗೂ ಅವರಿಗಿದೆ. ನಾವೂ ಕೂಡ ಸಿಎಂ ಆಪ್ತರೇ, ದಯವಿಟ್ಟು ನಮ್ಮನ್ನು ಆಪ್ತತೆಯಿಂದ ದೂರ ಮಾಡಬೇಡಿ ಎಂದರು.