ಕನಕಪುರ : ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಎರೆಡು ವರ್ಷ ಪೂರೈಸಿದ ಬೆನ್ನಲ್ಲೇ ತಂತ್ರ ಪ್ರತಿತಂತ್ರ ಜೊರಾಗಿದೆ. ಸಿಎಂ ಸಿದ್ದರಾಮಯ್ಯನವರ ಬಣದ ತಂತ್ರ ಒಂದು ಕಡೆಯಾದರೆ ಡಿಸಿಎಂ ಡಿಕೆಶಿ ಬಣದ ಪ್ರತಿತಂತ್ರ ಮತ್ತೊಂದೆಡೆ ರೆಡಿಯಾಗ್ತಿದೆ.
ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದು, ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಿಯೇ ಇಲ್ಲ ಎಂದಿದ್ದಾರೆ. ಕನಕಪುರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನ ಹಸ್ತಾಂತರ ಐದಾರು ಜನರ ಗುಟ್ಟಿನ ವಿಚಾರ. ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರೋದಕ್ಕೆ ನನಗೆ ಇಷ್ಟವಿಲ್ಲ.
ಪಕ್ಷ ಇದ್ದರೆ ನಾವೆಲ್ಲ, ಪಕ್ಷವನ್ನು ನಾನು ವೀಕ್ ಮಾಡುವುದಿಲ್ಲ. ಸಿದ್ದರಾಮಯ್ಯ ಬಜೆಟ್ ಮಂಡಿಸ್ತೇನೆ ಅಂದಿದ್ದಾರೆ, ಮಂಡಿಸಲಿ. ಅವರು ವಿಪಕ್ಷ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೂಡ ದುಡಿದಿದ್ದಾರೆ. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ ಎಂದು ಡಿಕೆಶಿ ಹೇಳಿದ್ದಾರೆ. ಜೊತೆಗೆ ರಾಯರೆಡ್ಡಿ, ಡಿವಿಎಸ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ಅವರ ವಕ್ತಾರ ಅಲ್ಲ ಎಂದು ಇದೇ ವೇಳೆ ತಿರುಗೇಟು ನೀಡಿದ್ದಾರೆ.