ಬೆಂಗಳೂರು : ಕೆಲವರು ನಾನೇ ಹೆಚ್ಚು, ನಾನು ಇಲ್ಲದಿದ್ದರೆ ಮುಸ್ಲಿಂ ಸಮುದಾಯಕ್ಕೆ ಮತ್ತೊಬ್ಬ ನಾಯಕ ಇಲ್ಲ ಎಂಬ ಭಾವನೆಯಲ್ಲಿದ್ದಾರೆ. ನಾವು ಬಿಜೆಪಿ ಸೋಲಿಸಲು ಹೋದರೆ ನಮ್ಮಲ್ಲಿನ ಕೆಲವರು ಡಬಲ್ ಗೇಮ್ ಆಡಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನಿಸಿದರು ಎಂದು ಸಚಿವ ಜಮೀರ್ ಹೆಸರು ಹೇಳದೇ ಶಾಸಕ ರಿಜ್ವಾನ್ ಅರ್ಷದ್ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಿಜ್ವಾನ್ ಅರ್ಷದ್, ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಬಿಂಬಿಸುತ್ತಿದ್ದಾರೆ. ವಾಸ್ತವದಲ್ಲಿ ಕೇವಲ ಒಬ್ಬ ವ್ಯಕ್ತಿಯ ಪರವಾಗಿ ಕೆಲವರು ಬ್ಯಾಟಿಂಗ್ ಮಾಡಿದ್ದಾರೆ. ಇವರ ತಪ್ಪು ನಿರ್ಧಾರಗಳಿಂದಾಗಿ ಅಲ್ಪಸಂಖ್ಯಾತರಿಗೆ ಸಿಗಬೇಕಿದ್ದ ಸೀಟು ಕೈತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳಿದ್ದು ನಿಜ. ಟಿಕೆಟ್ ಕೇಳುವಾಗ ಮೂರ್ನಾಲ್ಕು ಪರ್ಯಾಯ ಹೆಸರುಗಳನ್ನು ಸೂಚಿಸಬೇಕಿತ್ತು. ಆದರೆ, ಕೇವಲ ಜಬ್ಬಾರ್ಗೆ ಮಾತ್ರ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿಯಲಾಯಿತು ಎಂದರು. ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಿಸಿದ್ದರಿಂದಾಗಿ ವಸತಿ ಸಚಿವ ಜಮೀರ್ ಅಹಮದ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಸಕ್ರಿಯವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಎಂಬುದು ಸಮುದಾಯದ ನಾಯಕರ ಆರೋಪ.
ಇದನ್ನೂ ಓದಿ : ದಾವಣಗೆರೆ ದಂಗಲ್, ಜಬ್ಬಾರ್ ರಾಜೀನಾಮೆ ಅಂಗೀಕಾರ, ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಬಿಗ್ ಶಾಕ್..!
ಅಲ್ಪಸಂಖ್ಯಾತರ ಚಾಂಪಿಯನ್ ಎನಿಸಿಕೊಂಡವರು ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದರು. ಮುಖ್ಯಮಂತ್ರಿಯ ಮುಂದೆಯೂ ಅದೇ ‘ಒಬ್ಬ ನಾಯಕರು’, ಕೊಟ್ಟರೆ ಜಬ್ಬಾರ್ಗೆ ಕೊಡಿ ಎಂದರು. ಜಬ್ಬಾರ್ ಬಿಟ್ಟರೆ ಬೇರೆ ಮುಸ್ಲಿಂ ಆಕಾಂಕ್ಷಿಗಳು ಇರಲಿಲ್ಲವೇ? ಒಬ್ಬ ವ್ಯಕ್ತಿಯ ಪರ ನಿಂತು ಸಮುದಾಯದ ಪರ ಎಂದು ಹೇಳಿಕೊಳ್ಳುವುದು ಸರಿಯೇ? ಟಿಕೆಟ್ ನೀಡದೆ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡುವುದು ಸರಿಯೇ’ ಎಂದು ಕಿಡಿಕಾರಿದರು.
ಜಬ್ಬಾರ್ ಪರ ಪಟ್ಟು ಹಿಡಿದಿದ್ದು ಯಾರು ಎಂಬ ಪ್ರಶ್ನೆಗೆ, ಅವರು ಯಾರು ಎಂಬುದನ್ನು ನೀವೇ ತಿಳಿದುಕೊಳ್ಳಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಪ್ರಚಾರಕ್ಕೆ ಬಾರದವರು ಮೂವರು. ಒಬ್ಬರ ಮೇಲೆ ಕ್ರಮ ಆಗಿದೆ. ಇನ್ನಿಬ್ಬರು ಇದ್ದಾರಲ್ಲ, ಅದರಲ್ಲಿ ಒಬ್ಬರು ಜಬ್ಬಾರ್ಗೆ ಟಿಕೆಟ್ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದರು ಎಂದು ಸೂಕ್ಷ್ಮವಾಗಿ ಜಮೀರ್ ವಿರುದ್ಧ ಆರೋಪಿಸಿದರು.
ಇನ್ನು ಚುನಾವಣೆಯಲ್ಲಿ ಯಾವ ಮುಸ್ಲಿಂ ನಾಯಕರು, ಹೇಗೆ ಕೆಲಸ ಮಾಡಿದರು ಎಂಬ ಬಗ್ಗೆ ಹೈಕಮಾಂಡ್ಗೆ ಗೊತ್ತಿದೆ. ನಾವು ಬಿಜೆಪಿ ಸೋಲಿಸಲು ಹೋಗಿದ್ದೆವು. ಆದರೆ, ನಮ್ಮಲ್ಲಿ ಕೆಲವರು ಡಬಲ್ ಗೇಮ್ ಆಡಿದರು ಎಂದೂ ರಿಜ್ವಾನ್ ಆರೋಪಿಸಿದರು.