ನಮ್ಮ ಸಂಸೃತಿಯನ್ನ ಪ್ರಪಂಚಕ್ಕೆ ಪರಿಚಯಿಸಿರುವ ರಿಷಬ್‌ ಶೆಟ್ಟಿ ಕಾರ್ಯವೈಖರಿ ಶ್ಲಾಘನೀಯ: ಡಿಸಿಎಂ ಡಿಕೆಶಿ

ಬೆಂಗಳೂರು : ಅಕ್ಟೋಬರ್‌ನಲ್ಲಿ ರಿಲೀಸ್ ಆಗಿದ್ದ ಕಾಂತಾರ ಚಾಪ್ಟರ್ 1 ಭಾರತೀಯ ಚಿತ್ರರಂಗ ಸೇರಿದಂತೆ ವಿಶ್ವಾದ್ಯಂತ ಸದ್ದು ಮಾಡಿತ್ತು. ಸಿನಿಮಾದಲ್ಲಿ ನಾಯಕನಾಗಿ ನಟಿಸಿ, ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಯಶಸ್ಸಿನ ಸಂಭ್ರಮದಲ್ಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನ ಭೇಟಿಯಾಗಿದ್ದಾರೆ.

ಹೌದು, ಕಾಂತಾರ ಚಿತ್ರವನ್ನು ದೇಶಾದ್ಯಂತ ಸಾಕಷ್ಟು ಗಣ್ಯರು ಮೆಚ್ಚಿಕೊಂಡಿದ್ದು ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಈ ಮಧ್ಯೆ ರಿಷಬ್ ಶೆಟ್ಟಿ ಕೂಡ ಅನೇಕ ಗಣ್ಯರನ್ನು ಭೇಟಿಯಾಗಿ ಸಿನಿಮಾದ ಸಕ್ಸಸ್ ಖುಷಿಯನ್ನು ಹಂಚಿಕೊಂಡಿದ್ದು, ಅದೇ ರೀತಿ ಇಂದು ಡಿಕೆ ಶಿವಕುಮಾರ್ ರನ್ನು ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಡಿಕೆಶಿ, ರಿಷಬ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನನ್ನ ಗೃಹಕಚೇರಿಯಲ್ಲಿ ಖ್ಯಾತ ನಟ ರಿಷಬ್ ಶೆಟ್ಟಿಯವರು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು. ಈ ವೇಳೆ ಕಾಂತಾರ: ಒಂದು ದಂತಕಥೆ – ಅಧ್ಯಾಯ 1ರ ಚಿತ್ರ ಯಶಸ್ವಿಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದೆ. ನಮ್ಮ ನೆಲಮೂಲದ ಆಚಾರ-ವಿಚಾರ, ಸಂಪ್ರದಾಯ, ಸಂಸೃತಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿರುವ ರಿಷಬ್ ಶೆಟ್ಟಿ ಅವರ ಕಾರ್ಯವೈಖರಿ ಶ್ಲಾಘನೀಯ. ಮುಂದಿನ ಅವರ ಚಿತ್ರರಂಗದ ಪಯಣಕ್ಕೆ ಒಳ್ಳೆಯದಾಗಲಿ, ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದೆ ಎಂದು ಬರೆದುಕೊಂಡಿದ್ದಾರೆ.

ಡಿಕೆಶಿ ಅವರನ್ನು ರಿಷಬ್ ಶೆಟ್ಟಿ ಭೇಟಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭೇಟಿಯಾಗಿರುವುದಕ್ಕೆ ನಿಖರ ಕಾರಣದ ಬಗ್ಗೆ ರಿಷಬ್ ಎಲ್ಲಿಯೂ ಹೇಳಿಕೊಂಡಿಲ್ಲ.

ಸದ್ಯ ಕಾಂತಾರ: ಚಾಪ್ಟರ್ 1 ಯಶಸ್ವಿ ಪ್ರದರ್ಶನ ಕಂಡಿದ್ದು, ಸುಮಾರು 850 ಕೋಟಿ ರೂ.ಗೂ ಅಧಿಕ ಹಣವನ್ನು ಗಳಿಸಿದೆ. ಕೆಜಿಎಫ್ 2 ನಂತರ ಅತೀ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿಯನ್ನು ಗಿಟ್ಟಿಸಿಕೊಂಡಿದೆ. ಅಲ್ಲದೆ, 2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *