ಗದಗ: ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟ ಸದಸ್ಯರು ಹಾಗೂ ಅಧಿಕಾರಿಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಎರಡೂವರೆ ವರ್ಷದಲ್ಲಿ ಒಂದೂ ಅಭಿವೃದ್ಧಿ ಕೆಲಸವಾಗಿಲ್ಲ. ಯಾವ ಪುರುಷಾರ್ಥಕ್ಕೆ ಈ ಎರಡೂವರೆ ವರ್ಷ ಅವಧಿ ಮುಗಿಸಿದರು ಎಂಬುದು ಜನತೆಗೆ ಹೇಳಬೇಕು ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಗುಡುಗಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಪಕ್ಷದ ಸದಸ್ಯರಿಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದು, ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡದಂತೆ ಸೂಚನೆ ನೀಡಿದೆ. ಆದ್ರೆ ಸಚಿವರು ಮತ್ತು ಇತರ ನಾಯಕರು ಮೌನವಾಗಿದ್ದಾರೆ ಕೆಲವರು ಈ ವಿಷಯದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ನವೆಂಬರ್ ಕ್ರಾಂತಿ ಭ್ರಾಂತಿ ನೋಡಿದರೆ ಸರ್ಕಾರದ ಮೇಲೆ ಕರ್ನಾಟಕದ ಜನತೆಗೆ ಭ್ರಾಂತಿಯಾಗುತ್ತಿದೆ. ಕಾಂಗ್ರೆಸ್ಸಿನವರು ಆಡಳಿತವನ್ನೇ ಮರೆತುಬಿಟ್ಟಿದ್ದಾರೆ. ಅಭಿವೃದ್ಧಿಯಂತೂ ಮರೀಚಿಕೆಯಾಗಿದೆ. ಹಣಕಾಸು ವ್ಯವಸ್ಥೆ ಸರಿ ಇಲ್ಲ. ಹೀಗಾಗಿ ಡ್ರಾಮಾ ಮಾಡಿಕೊಂಡು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಒಂದು ಹೇಳಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅದಕ್ಕೆ ತದ್ವಿರುದ್ಧವಾಗಿ ಇನ್ನೊಂದು ಹೇಳುತ್ತಾರೆ. ಮಂತ್ರಿಗಳು ಮತ್ತೊಂದು ರೀತಿಯ ಹೇಳಿಕೆ ನೀಡುತ್ತಾರೆ ಎಂದರು.
ಇನ್ನು ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಸಂದಾಯವಾಗುತ್ತಿರುವುದು ನಿಜ. ಕಾಂಗ್ರೆಸ್ ರಾಜ್ಯದಲ್ಲಿದ್ದಾಗ ಯಾವಾಗಲೂ ಇಲ್ಲಿಂದ ಹಣ ಕಳಿಸುವ ಪರಂಪರ ಇದೆ. ತೆಲಂಗಾಣ ರಾಜ್ಯದಲ್ಲೂ ದುಡ್ಡಿಲ್ಲ. ಕಾಂಗ್ರೆಸ್ಸಿನವರಿಗೆ ಕರ್ನಾಟಕ ಹಾಲು ಕರೆಯುವ ಹಸುವಾಗಿದೆ. ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬರುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಆಗಲಿ ಅದಕ್ಕೆ ಸಂತೋಷ. ಆದರೆ, ಇದ್ದ ಸಿಎಂ ಅವರೇ ಕೆಲಸ ಮಾಡುತ್ತಿಲ್ಲ. ಕರ್ನಾಟಕದ ಹಣೆಬರಹ ಕಾಂಗ್ರೆಸ್ ಕೈಯಲ್ಲಿ ಎಂದೆಂದೂ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ರು.