ಬೆಂಗಳೂರು : ರಾಜ್ಯದ ಪಾಪ್ಕಾರ್ನ್ ವ್ಯಾಪಾರಿಯೋರ್ವ, ತೆಲಂಗಾಣದ ವ್ಯಾಪಾರಿಯೋರ್ವನಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಪಾಪ್ಕಾರ್ನ್ ಸರಬರಾಜು ಮಾಡಿದ್ದು, ವ್ಯಾಪಾರದ ಹಣವನ್ನು ಆ ವ್ಯಾಪಾರಿ ನೀಡಿಲ್ಲ. ಇದರಿಂದ ರಾಜ್ಯದ ವ್ಯಾಪಾರಿಗಳು ನ್ಯಾಯ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಗೆ ಸಹಾಯ ಮಾಡುವಂತೆ ಪೊಲೀಸರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಬಳ್ಳಾಪುರದ ಪೆರೇಸಂದ್ರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ರೆಡ್ಡಿ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ನಡುವೆ ನಡೆದಿರುವ ಮಾತುಕತೆಯ ಆಡಿಯೊ ವೈರಲ್ ಆಗುತ್ತಿದೆ. ಜಮೀರ್ ಅಹ್ಮದ್ಖಾನ್ ಅವರು ತಮ್ಮ ಕಚೇರಿಯ ಆಪ್ತಸಹಾಯಕ ಲಕ್ಷ್ಮೀನಾರಾಯಣ ಅವರ ಪೋನ್ ಮೂಲಕ ಮಾತನಾಡಿದ್ದಾರೆ. ಒಂದು ಕೇಸಿಗೆ ಸಂಬಂಧಪಟ್ಟಂತೆ ಸಾಹೇಬರು ತಮ್ಮೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದ ಲಕ್ಷ್ಮೀನಾರಾಯಣ್ ಪೋನ್ ಅನ್ನು ಸಚಿವ ಜಮೀರ್ ಅಹ್ಮದ್ಗೆ ಕೊಡುತ್ತಾರೆ.
ಆಗ ಮಾತನಾಡುವ ಸಚಿವರು, ನಮಸ್ತೆ ಬ್ರದರ್ ಏನಿಲ್ಲ… ನಮ್ಮ ಹೈದರಾಬಾದ್ನ ಅಕ್ಬರ್ ಬಿಲ್ ತಬರ್ ಅಂತ. ನಮ್ಮ ಸಬಂಧಿ ಯಾವುದೋ ಒಂದು ಕೇಸಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಯಾರಿಗೋ ಒಂದಷ್ಟು ದುಡ್ಡು ಕೊಡಬೇಕಾಗಿತ್ತಂತೆ. ಅಕ್ಬರ್ ಪಾಷಾ ಅಂತ ಹೈದರಾಬಾದ್ನಿಂದ ತಾವು ಕರೆದುಕೊಂಡು ಬಂದಿದ್ದಿರಂತೆ. ಏನದು ಕೇಸು ಎಂದು ಪಿಎಸ್ಐ ಅವರನ್ನು ಕೇಳುತ್ತಾರೆ. ಸಚಿವರಿಗೆ ಮಾಹಿತಿ ನೀಡುವ ಪಿಎಸ್ಐ ಜಗದೀಶ್ರೆಡ್ಡಿ ಚೀಟಿಂಗ್ ಕೇಸಲ್ಲಿ ಎಫ್ಐಆರ್ ಆಗಿದೆ. ಹೀಗಾಗಿ ಬಂಧಿಸಿ ಕರೆತರಲಾಗಿದೆ ಎನ್ನುತ್ತಾರೆ.
ನೀವು ಹೇಳುತ್ತಿರುವಷ್ಟು ಹಣ ತಗೊಂಡಿಲ್ಲ ಅವರು, ಒಂಚೂರು ಸಹಾಯ ಮಾಡಿ ಬ್ರದರ್ ಅವರು ನಮಗೆ ಬಹಳ ಬೇಕಾದವರು ಎನ್ನುತ್ತಾರೆ ಸಚಿವರು. ಪಿಎಸ್ಐ ಸರಿ ಸರ್ ಎನ್ನುತ್ತಾರೆ. ನಂತರ ಮಾತನಾಡುವ ಸಚಿವ ಜಮೀರ್ ಅಹ್ಮದ್ ಖಾನ್ ಈಗ ಏನು ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ಪಿಎಸ್ಐ ದೂರು ಬಂದ ಕೂಡಲೇ ಹೈದರಾಬಾದ್ಗೆ ಹೋಗಿ ಸಮಯಕೊಟ್ಟು ಸೆಟಲ್ ಮಾಡಿಕೊಳ್ಳುವಂತೆ ಹೇಳಿದ್ದೆವು. ಆರೋಪಿಯನ್ನು ಪೆರೇಸಂದ್ರಕ್ಕೆ ಕೂಡ ಕರೆಸಿ ಇಲ್ಲಿಯೂ ಮಾತುಕತೆ ಮೂಲಕ ಸೆಟಲ್ ಮಾಡಿಕೊಂಡರೆ ನಾನು ಬಿ ರಿಪೋರ್ಟ್ ಹಾಕುವುದಾಗಿ ಹೇಳಿದ್ದೆ. ಇಬ್ಬರಿಗೂ ಕೂಡ ಈಗೋ ಪ್ರಶ್ನೆ. ಅವರೂ ಒಪ್ಪುತ್ತಿಲ್ಲ, ಇವರೂ ಒಪ್ಪುತ್ತಿಲ್ಲ ಎನ್ನುತ್ತಾರೆ.
ಆಗ ಮಾತನಾಡುವ ಸಚಿವರು ಈಗೊಂದು ಚಾನ್ಸ್ ಕೊಟ್ಟು ಸೆಟಲ್ ಮಾಡಿಕೊಳ್ಳಲು ಹೇಳಿ ಎನ್ನುತ್ತಾರೆ. ಪಿಎಸ್ಐ ಮಾತನಾಡಿ ರಾಮಕೃಷ್ಣಪ್ಪ, ಅಕ್ಬರ್ ಅವರಿಗೆ ಜೋಳದ ಲೋಡುಗಳನ್ನು ಕಳಿಸಿರುವುದು ನಿಜ. ಅವರು ಅದನ್ನು ಪಡೆದುಕೊಂಡಿರುವುದೂ ನಿಜ. ಎರಡಕ್ಕೂ ದಾಖಲೆಯಿದೆ. ಇಬ್ಬರೂ ಕೂತು ಸೆಟಲ್ ಮಾಡಿಕೊಂಡರೆ ಮಾಡಿಕೊಳ್ಳಲಿ. ಹೈದರಾಬಾದಿನ ಸೈಬರಾಬಾದಿನಲ್ಲಿ ಕುಳಿತುಕೊಂಡು ಅವರಿಗೆ ಇದನ್ನೇ ಹೇಳಿದ್ದೇನೆ ಎನ್ನುತ್ತಾರೆ. ಆಗ ಮಾತನಾಡಿದ ಜಮೀರ್ ಅಹ್ಮದ್, ಇದೊಂದು ಬಾರಿ ಅವಕಾಶ ಮಾಡಿಕೊಡಿ, ರಾಮಕೃಷ್ಣಪ್ಪ ಹೇಳಿದಷ್ಟು ಹಣ ಅವರು ಕೊಡಬೇಕಾಗಿಲ್ಲ. ಅಕ್ಬರ್ ಅವರೊಂದಿಗೆ ಮಾತನಾಡಿ ಹಣ ಸೆಟಲ್ ಮಾಡಿಸುತ್ತೇನೆ ಎನ್ನುತ್ತಾರೆ.
ಈ ಆಡಿಯೋ ಸಕತ್ ವೈರಲ್ ಆಗಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಜಂಗಿ ಕುಸ್ತಿಗೆ ಅಖಾಡ ನಿರ್ಮಾಣ ಮಾಡಿಕೊಟ್ಟಂತೆ ಆಗಿದೆ. ಮೇಲಾಗಿ ಸಚಿವರು ಆರೋಪಿಗಳ ಪರವಹಿಸಿರುವುದು ರೈತಾಪಿ ವರ್ಗವನ್ನು ಕೆರಳಿ ಕೆಂಡವಾಗುವಂತೆ ಮಾಡಿದ್ದು, ಇದು ಮುಂದೆ ಯಾವ ಆಯಾಮ ಪಡೆದುಕೊಳ್ಳುವುದೋ ಕಾದು ನೋಡಬೇಕಿದೆ.