ಹುಬ್ಬಳ್ಳಿ : ಸಿಎಂ ಸಿದ್ದರಾಮಯ್ಯ ಪ್ರತಿ ಇಲಾಖೆಗೂ ರೇಟ್ ಫಿಕ್ಸ್ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ದರು ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಡಿನ್ನರ್ ಮೀಟಿಂಗಿಗೆ ಕರೆದದ್ದು ಯಾಕೆ ಗೊತ್ತಾ? ಒಬ್ಬೊಬ್ಬ ಸಚಿವರನ್ನು ಪ್ರತ್ಯೇಕವಾಗಿ ಕರೆದು ಯಾರು ಎಷ್ಟು ಕೊಡಬೇಕು ಅಂತ ರೇಟ್ ಫಿಕ್ಸ್ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್ ಹೈಕಮಾಂಡ್ ಪಾಲಿಗೆ ಎಟಿಎಂ ಆಗಿದೆ. ಬಿಡಿಎ, ಜಿಬಿಎ ವ್ಯಾಪ್ತಿಯ ಸೇವೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಪ್ರತಿ ಇಲಾಖೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ತನಿಖೆ ನಡೆಸಿದರೆ ಯಾರ ಪಾಲು ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ ಎಂದರು.
ಇನ್ನು ಆರ್ಎಸ್ಎಸ್ ಚಟುವಟಿಕೆಯಲ್ಲಿ ಸರ್ಕಾರಿ ನೌಕರರಿಗೆ ಭಾಗಿಯಾಗಲು ಕಡಿವಾಣ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಕಾನೂನು ಜ್ಞಾನ ಇಲ್ಲವ ಸಿದ್ದರಾಮಯ್ಯನವರೇ ನಿಮ್ಮ ಕಾನೂನು ಪದವಿಗೆ ಬೆಂಕಿ ಹಚ್ಚಿ. ಸಚಿವ ಪ್ರಿಯಾಂಕ್ ಖರ್ಗೆ ನಿಮಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಎಲ್ಲಾ ನೌಕರರಿಗೆ ಅವಕಾಶ ನೀಡಿದೆ. ಸರ್ಕಾರಿ ನೌಕರರು ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ನಿಯಮವಿದೆ ಎಂದು ಹೇಳಿದರು. ಇತ್ತೀಚಿಗೆ ಸಿದ್ದರಾಮಯ್ಯ ಆಡಳಿತದಲ್ಲಿ ಬಿಗಿ ಕಳೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಆರ್ಥಿಕತೆ ಕುಸಿದಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಗುತ್ತಿಗೆದಾರರ ಆರೋಪಕ್ಕೆ ಸಮಜಾಯಿಷಿ ಕೊಡಲಾಗದ ಸರ್ಕಾರ ಕೋರ್ಟ್ಗೆ ಹೋಗಲಿ ಎಂದು ಹೇಳುತ್ತಿದೆ. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆ ಬಗ್ಗೆ ಕಾಳಜಿ ವಹಿಸೋದನ್ನ ಬಿಟ್ಟು ಆರ್ಎಸ್ ಎಸ್ ಬಗ್ಗೆ ಮಾತಾಡ್ತಾರೆ ಎಂದು ಜಗದೀಶ್ ಶೆಟ್ಟರ್ ಕಿಡಿಕಾರಿದರು.
ಮುಂದುವರೆದು ಮಾತನಾಡಿದ ಅವರು, ಇವರಿಗೆ ಆರ್ಎಸ್ಎಸ್ ಬಗ್ಗೆ ಮಾತನಾಡೋಕೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಜಗದೀಶ್ ಶೆಟ್ಟರ್, ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ನಿಷೇದದ ಬಗ್ಗೆ ಪತ್ರ ಬರೆದರು. ಸಿದ್ದರಾಮಯ್ಯ ಏನು ಕ್ರಮ ಕೈಗೊಂಡಿದ್ದಾರೆ. ಜಗದೀಶ್ ಶೆಟ್ಟರ್ ಸಿಎಂ ಇದ್ದಾಗ ಮಾಡಿದ ಆದೇಶ ಮುಂದುವರೆಸಿದ್ದೇವೆ ಎಂದರು.