‘ಇಟಲಿ ಮಾತೆಯ ಟೆಂಪಲ್ ಸುತ್ತಿ ಕಪ್ಪ ಕಾಣಿಕೆ ಕೊಟ್ರೆ ಡಿಕೆಶಿಗೆ ಸಿಎಂ ಸೀಟ್ ಪಕ್ಕಾ’

ದಾವಣಗೆರೆ: ಡಿಸಿಎಂ ಡಿ.ಕೆ. ಶಿವಕುಮಾರ್ ಅವ್ರು ರಾಜ್ಯಾದ್ಯಂತ ದೇವಸ್ಥಾನಗಳನ್ನ ಸುತ್ತುವುದನ್ನ ಬಿಟ್ಟು, ಇಟಲಿ ಮಾತೆಯ ಟೆಂಪಲ್ ಸುತ್ತಿದ್ರೆ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ದಾರಿ ತಪ್ಪಿದ ಮಗ. ಅವರು ಚಾಮುಂಡಿ, ಮಾರಮ್ಮ, ಗೌರಮ್ಮ, ರಾಘವೇಂದ್ರ ಸ್ವಾಮಿ ಎಂದು ಟೆಂಪಲ್ ರನ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಈ ಟೆಂಪಲ್‌ಗಳಿಗಿಂತ ದೊಡ್ಡ ಟೆಂಪಲ್ ಇಟಲಿ ಟೆಂಪಲ್ ಇದೆ. ಆ ಟೆಂಪಲ್ ಸುತ್ತಬೇಕು. ಅಲ್ಲಿ ಸರಿಯಾದ ಕಪ್ಪ ಕಾಣಿಕೆ ಕೊಟ್ಟು, ದೇವರನ್ನು ಪ್ರದಕ್ಷಿಣೆ ಹಾಕಿದರೆ ಮಾತ್ರ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ನಾಯಕತ್ವ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಆಡಿರುವ ಮಾತು ಡಿ.ಕೆ ಶಿವಕುಮಾರ್ ರನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿ ಆಗಿತ್ತೆ ಎಂದು ನಾವು ಹೇಳಿದ್ದಕ್ಕೆ, ಕಾಂಗ್ರೆಸ್ ನಾಯಕರು ಕ್ರಾಂತಿನೂ ಇಲ್ಲ ಭ್ರಾಂತಿನೂ ಇಲ್ಲ ಎನ್ನುತ್ತಿದ್ರು. ಆದರೆ ಹೀಗ್ಯಾಕೆ‌ ಈ ರೀತಿ ಮಾತಾಡಿದ್ದಾರೆ. ಅಷ್ಟೇ ಅಲ್ಲದೇ ಯತೀಂದ್ರ ಸಿದ್ದರಾಮಯ್ಯ ತಮ್ಮ ಮಾತಿನ ಮೂಲಕ ಬೆಳಗಾವಿಯಿಂದಲೇ ಸರ್ಕಾರ ಬೀಳುವುದಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ.

ಮುಂದುವರೆದು ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ್ದ ನವೆಂಬರ್ ಕ್ರಾಂತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಆರ್‌.ಅಶೋಕ್, ‘ಯತೀಂದ್ರ ಈ ವಿಚಾರ ಹೇಳಿದಾಗ ಕಾಂಗ್ರೆಸ್‌ನವರಿಗೆ ಸರಿ ಇರುತ್ತದೆ. ಆದರೆ, ರಾಜಣ್ಣ ಹೇಳಿದಾಗ ಅವರನ್ನು ಓಡಿಸಿಬಿಟ್ಟರು. ಈ ಹೇಳಿಕೆ ಸಿದ್ದರಾಮಯ್ಯನವರೇ ಹೇಳಿ ಮಾಡಿಸಿರುವುದು. ಬೆಳಗಾವಿಗೆ ಹೋಗಿ ಯತೀಂದ್ರ ಅವರ ಮನೆಯಲ್ಲೇ ಹೇಳಿದ್ದಾರೆ ಎಂದರೆ, ಡಿ.ಕೆ. ಶಿವಕುಮಾರ್ ಅವರಿಗೆ ಪಂಗನಾಮ ಪಕ್ಕಾ. ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ ಎಂದು ಲೇವಡಿ ಮಾಡಿದ್ರು.

Leave a Reply

Your email address will not be published. Required fields are marked *